ಸಂಸದ ತೇಜಸ್ವಿ ಸೂರ್ಯ ಪತ್ರ : ದುರ್ಗಾ ಪೂಜೆ ಆಚರಣೆ ನಿಯಮದಲ್ಲಿ ಸಡಿಲಿಕೆ ಮಾಡಿದ ಬಿಬಿಎಂಪಿ . | ಜನತಾ ನ್ಯೂಸ್
ಬೆಂಗಳೂರು : ದುರ್ಗಾ ಪೂಜೆಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದ ಬಿಬಿಎಂಪಿ ಸಂಸದ ತೇಜಸ್ವಿ ಸೂರ್ಯ ಅವರ ಖಡಕ್ ಪತ್ರದ ಬಳಿಕ ನಿಯಮಗಳಲ್ಲಿ ಸಡಿಲಿಕೆಗೆ ಮುಂದಾಗಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಇಂದು ದುರ್ಗಾ ಪೂಜಾ ಸಂಘದ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸದರಿ ಆದೇಶದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದ್ದು, ಅವುಗಳು ಈ ಕೆಳಗಿನಂತಿವೆ.
• ಸಾರ್ವಜನಿಕ ಸ್ಥಳಗಳಲ್ಲಿ ದುರ್ಗಾ ಮೂರ್ತಿಗಳ 4 ಅಡಿ ಎತ್ತರ ನಿರ್ಬಂಧವನ್ನು ತೆಗಿಯಲಾಗಿದೆ.
• ಪುಷ್ಪಾಂಜಲಿ ಮತ್ತು ಸಂಧಿ ಪೂಜೆ ವೇಳೆ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು 50 ಜನರಿಗೆ ಹಂತ-ಹಂತವಾಗಿ ಬರಲು ಅವಕಾಶ ಕಲ್ಪಿಸಿದ್ದು, ಹಂತ-ಹಂತವಾಗಿ ಬರುವ ಒಟ್ಟು ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ.
• ಅವಶ್ಯಕತೆ ಅನುಸಾರ, ಒಂದು ವಾರ್ಡಿಗೆ ಅನೇಕ ಮೂರ್ತಿಗಳನ್ನು ಇಡಲು ಅವಕಾಶ ಕಲ್ಪಿಸಿದ್ದು, ವಲಯ ಜಂಟಿ ಆಯುಕ್ತರು ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು.
• ಪ್ರಾರ್ಥನಾ ಸಮಯದಲ್ಲಿ ಸಾಂಪ್ರದಾಯಿಕ ವಾದ್ಯಗಳನ್ನು(ಡಾಕ್ ಮತ್ತು ಡೋಲ್) ಅನುಮತಿಸಲಾಗಿದೆ.
• ಇನ್ನುಳಿದ ವಿಷಯಗಳ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶದಂತೆ ಷರತ್ತುಗಳನ್ನು ಪಾಲಿಸತಕ್ಕದ್ದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿವಾಗಿ ದುರ್ಗಾ ಪೂಜೆ ಆಚರಣೆಯ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ದಿನಾಂಕ:05-10-2021 ರಂದು ಮಂಗಳವಾರ ಆದೇಶ ಹೊರಡಿಸಿದ್ದರು.
ಈ ಆದೇಶಗಳ ಕುರಿತು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ ಅವರು, ಆಡಳಿತವು ಕೇವಲ ಹಿಂದೂ ಆಚರಣೆಯಲ್ಲಿ ಮಾತ್ರ ಕಠಿಣ ಮತ್ತು ಅನಿಯಂತ್ರಿತ ನಿಯಮಾವಳಿ ಹೇರುತ್ತದೆ ಮತ್ತು ಬೇರೆ ನಂಬಿಕೆಗಳ ಆಚರಣೆ ವಿಷಯಗಳಲ್ಲಿ ಕಣ್ಣು ಕುರುಡಾಗಿ ಪರಿವರ್ತಿತವಾಗುತ್ತದೆ, ಎಂದು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ, ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ತಾರತಮ್ಯ, ಅನಿಯಂತ್ರಿತ ಮತ್ತು ತರ್ಕಬದ್ಧವಲ್ಲದ ದುರ್ಗಾ ಪೂಜಾ ನಿಯಮಗಳನ್ನು ಮರುಪರಿಶೀಲಿಸುವಂತೆ, ಆಗ್ರಹಿಸಿದ್ದರು.