ಯುವಕನ ಕೊಲೆ, ಯುವತಿಯ ತಂದೆ-ತಾಯಿ ಸೇರಿ 10 ಮಂದಿ ಅರೆಸ್ಟ್! | ಜನತಾ ನ್ಯೂಸ್
ಬೆಳಗಾವಿ : ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ ಮೃತನ ಪ್ರೇಯಸಿಯ ತಂದೆ-ತಾಯಿ ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ.
ಯುವತಿ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಆರೋಪಿಗಳನ್ನ ಬಂಧಿಸಲಾಗಿದೆ.
ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ(24) ಮೃತ ದುರ್ದೈವಿ. ವಾಹನಗಳ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಈರಪ್ಪ-ಸುಶೀಲಾ ದಂಪತಿಯ ಹಿರಿಯ ಪುತ್ರಿ ಹಾಗೂ ಅರ್ಬಾಜ್ ಕಳೆದ 4 ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಲವು ಸಲ ರಾಜಿ ಪಂಚಾಯತ್ ಮಾಡಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆಸಿದ್ದರು ಆದರೆ ಅದು ಕೈಗೊಡಲಿಲ್ಲ.
ನಂತರದಲ್ಲಿ ಯುವತಿ ತಂದೆ ಈರಪ್ಪ ಕುಂಬಾರ ಮತ್ತು ತಾಯಿ ಸುಶೀಲಾ ಕುಂಬಾರ ಇಬ್ಬರೂ ಮಗಳ ಪ್ರಿಯಕರನ ಕೊಲೆಗೆ ಸಂಚು ರೂಪಿಸಿದ್ದರು. ಪುಂಡಲಿಕ ಅಲಿಯಾಸ್ ಮಹಾರಾಜ್ ಮುತಗೇಕರ್ ಎಂಬಾತನಿಗೆ ಸುಪಾರಿ ಕೊಟ್ಟಿದ್ದರು.
ಸೆ.28ರಂದು ಅರ್ಬಾಜ್ನನ್ನು ಕರೆಸಿಕೊಂಡ ಪುಂಡಲೀಕನ ತಂಡ ಕೊಲೆ ಮಾಡಿ ಅನುಮಾನ ಬಾರದಂತೆ ರೈಲ್ವೆ ಹಳಿ ಮೇಲೆ ಶವ ಎಸೆದು ಹೋಗಿದ್ದರು. ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ನಾಜಿಮಾ ಶೇಕ್ ಸೆ.29ರಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿದ್ದು, ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಅರ್ಬಾಜ್ನನ್ನು ಪ್ರೇಯಸಿ ಕುಟುಂಬಸ್ಥರೇ ಸೇರಿಕೊಂಡು ಕೊಲೆ ಮಾಡಿಸಿರುವುದು ತಿಳಿದುಬಂದಿದೆ.