ಯಡಿಯೂರಪ್ಪನ ಕಂಟ್ರೋಲ್ಗೆ ತೆಗೆದುಕೊಳ್ಳಲು ಆಪ್ತನ ಮೇಲೆ ಐಟಿ ದಾಳಿ ನಡೆದಿದೆ | ಜನತಾ ನ್ಯೂಸ್
ಬೆಂಗಳೂರು : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಉದ್ದೇಶದಿಂದ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪನವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಅದರೆ ಅಧಿಕಾರಿಗಳು, ಸಂಬಂಧ ಪಟ್ಟವರು ಅಧಿಕೃತವಾಗಿ ಹೇಳಿಕೆ ನೀಡುವವರೆಗೂ ನಾನು ಏನೂ ಮಾತನಾಡುವುದಿಲ್ಲ. ಇದರ ಹಿಂದೆ ಒಳ ರಾಜಕೀಯ ಇದ್ದೇ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ಉಮೇಶ್, ಮಾಜಿ ಸಿಎಂ ಬಿಎಸ್ ವೈ ಆಪ್ತ ಸಹಾಯಕನಲ್ವಾ, ಅದನ್ನ ಅಲ್ಲಗಳೆಯಲು ಅಗೋದಿಲ್ವಲ್ಲ. ಇದರ ಹಿಂದೆ ಒಳರಾಜಕೀಯ ಇದ್ದೇ ಇದೆ. ಬಿಎಸ್ವೈನ ಕಂಟ್ರೋಲ್ಗೆ ತೆಗೆದುಕೊಳ್ಳಲು ಆಪ್ತನ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಬಿಜೆಪಿಯಿಂದಲೇ ಆಗಿದೆ ಎಂದು ಆರೋಪಿಸಿದರು.
ಇನ್ನು ಕೆಲವು ಸಚಿವರು ದೆಹಲಿಗೆ ತೆರಳಿದ್ದರು. ಅಲ್ಲಿ ಹೋಗಿ ನಮ್ಮ ಮೇಲೆ ದಾಳಿ ಮಾಡಬೇಡಿ, ನಮ್ಮ ಸಹೋದರರ ಮೇಲೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೀರಾವರಿ ಇಲಾಖೆ ಟೆಂಡರ್ ಬಗ್ಗೆ ಮಾತನಾಡಿದ್ದು ಗೊತ್ತಿದೆ, ಯಾವ ಹೊಟೇಲ್ ನಲ್ಲಿ ಯಾರು ಮಾತನಾಡಿದ್ರು ಅನ್ನೋದು ಗೊತ್ತಿದೆ. ಅವರ ಮೇಲೂ ದಾಳಿಯಾಗಬೇಕಲ್ವೇ, ಅವರನ್ನೂ ವಿಚಾರಿಸಬೇಕಲ್ವಾ ಎಂದು ಪ್ರಶ್ನಿಸಿದರು.
ಅಧಿಕಾರದಿಂದ ಕೆಳಗಿಳಿದಿರುವ ಯಡಿಯೂರಪ್ಪರನ್ನು ಕಂಟ್ರೋಲ್ ತೆಗೆದುಕೊಳ್ಳೋಕೆ ಮಾಡ್ತಿದ್ದಾರೆ. ದೆಹಲಿಯವರು ಅಲ್ಲೇ ಮಾಡ್ತಿದ್ದಾರೆ, ಹೀಗಾಗಿ ಆಂತರಿಕ ರಾಜಕೀಯ ಇದ್ದೇ ಇರುತ್ತೆ. ಕೆಲವರ ರಕ್ಷಣೆ ಮಾಡಲಾಗಿದೆ. ನೀರಾವರಿ ಇಲಾಖೆಯಲ್ಲಿ ಎಲ್ಲವೂ ನಡೆಯುತ್ತಿದೆ. ಯಾವ ಹೋಟೆಲ್ ನಲ್ಲಿ ಏನು ನಡೆಯುತ್ತಿತ್ತು ಗೊತ್ತು. ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ ಎಂದು ಡಿಕೆಶಿ ಶಂಕೆ ವ್ಯಕ್ತಪಡಿಸಿದರು.