ಆಧುನಿಕ ಮಹಿಳೆಯರು ಮಕ್ಕಳನ್ನು ಬಯಸುವುದಿಲ್ಲ: ಸುಧಾಕರ್ ಹೇಳಿಕೆಗೆ ವ್ಯಾಪಕ ಆಕ್ರೋಶ | ಜನತಾ ನ್ಯೂಸ್
ಬೆಂಗಳೂರು : ಆಧುನಿಕ ಮಹಿಳೆಯರು ಮಕ್ಕಳನ್ನು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ಡಾ.ಕೆ .ಸುಧಾಕರ್ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
"ದೇಶದಲ್ಲಿನ ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ" ಎಂದು ರವಿವಾರ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆಯೋಜಿಸಿದ್ದ 25ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದರು.
ನಾನು ಇಂದು ಈ ಮಾತನ್ನು ಹೇಳಲು ಬೇಸರ ಪಡುತ್ತೇನೆ, ನನ್ನನ್ನು ಕ್ಷಮಿಸಿ ಎಂದು ಮಹಿಳೆಯರ ಬಗ್ಗೆ ಈ ಹೇಳಿಕೆಯನ್ನು ನೀಡಿದ್ದರು. ಇಂದಿನ ಆಧುನಿಕ ಮಹಿಳೆಯರು ಹೆಚ್ಚಾಗಿ ಈ ರೀತಿಯ ಮನೋಭಾವವನ್ನು ಹೊಂದಿದ್ದಾರೆ. ಇದು ಪಾಶ್ಚತ್ಯ ಸಂಸ್ಕೃತಿಯ ಪಾಲನೆ. ಈ ಬದಲಾವಣೆ ಒಳ್ಳೆಯದಲ್ಲ. ಹಾಗೆಯೇ ಈಗಿನ ಜನರು ತಮ್ಮ ಪೋಷಕರು ತಮ್ಮ ಜೊತೆ ಜೀವಿಸಬೇಕು ಎಂಬುವುದನ್ನು ಕೂಡಾ ಒಪ್ಪುವುದಿಲ್ಲ ಎಂದು ಹೇಳಿದ್ದರು.
ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಾರೆ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್, ಡಾ.ಸುಧಾಕರ್ಗೆ ಕೌನ್ಸೆಲಿಂಗ್ ಅಗತ್ಯವಿದೆ. ಇಂತಹ ವ್ಯಕ್ತಿಗಳಿಗೆ ವಿಶ್ವ ಮಾನಸಿಕ ಆರೋಗ್ಯ ದಿನದಂದು ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ. ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನ ಬೇರೆಯವರು ನಿರ್ಧರಿಸೋದಲ್ಲ ಆಕೆಯೇ ನಿರ್ಧರಿಸಬೇಕು. ಮದುವೆಯಾದ ಬಳಿಕ ಏಕಾಂಗಿಯಾಗಿ ಜೀವಿಸುವ ಅವರ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನಾದರೂ ಪ್ರತಿಕ್ರಿಯೆ ಇದೆಯಾ? ಎಂದು ಟ್ವೀಟ್ ಮಾಡುವ ಮೂಲಕ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನೆ ಮಾಡಿದ್ದಾರೆ.