ಪಂಜಾಬ್ ಸಿಎಂ ಚನ್ನಿ ಮಗನ ಮದುವೆಗೆ ಗೈರಾದ ಸಿಧು ಕೊಟ್ಟ ಹೇಳಿಕೆ ಏನು? | ಜನತಾ ನ್ಯೂಸ್
ಮೊಹಾಲಿ : ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರ ಮಗ ನವಜಿತ್ ಸಿಂಗ್ ಅವರ ವಿವಾಹ ಭಾನುವಾರ(ಅಕ್ಟೋಬರ್ 10, 2021) ಮೊಹಾಲಿಯಲ್ಲಿ ನಡೆದಿದೆ. ಸಿಖ್ ಆಚರಣೆಗಳ ಪ್ರಕಾರ "ಆನಂದ್ ಕರಾಜ್" ಅನ್ನು ಗುರುದ್ವಾರ ಸಚ್ಚಾ ಧನ್ ನಲ್ಲಿ ನಡೆಸಿದ್ದು ವಿಶೇಷವಾಗಿತ್ತು.
ಪಂಜಾಬ್ ರಾಜ್ಯದ ಕಾಂಗ್ರೆಸ್ ಘಟಾನುಘಟಿಗಳಿಂದ ತುಂಬಿತುಳುಕುತ್ತಿದ್ದ ಮುಖ್ಯಮಂತ್ರಿ ಚನ್ನಿ ಮಗನ ಮದುವೆ ಸಂದರ್ಭದಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಗೈರು ಹಾಜರಿ ಎದ್ದು ಕಾಣುತ್ತಿದ್ದುದು ವಿಶೇಷ ಎನ್ನಲಾಗಿದೆ. ಸಿಎಂ ಚನ್ನಿ ವಿರುದ್ಧ ಸಿಧು ನಿರಂತರ ರಾಜಕೀಯ ಹೇಳಿಕೆ ನಿಡುತ್ತಿದ್ದರೂ, ಸಿಎಂ ಮಗನ ಮದುವೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ, ನವಜೋತ್ ಸಿಂಗ್ ಸಿಧು ಮಾತೆ ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಲು ಜಮ್ಮುವಿನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ, ಎಂದು ಸಮಜಾಯಿಷಿ ನೀಡಲಾಗಿದೆ.
"ನವರಾತ್ರಿಯ ಸಮಯದಲ್ಲಿ ಆದಿ ತಾಯಿಯ ದರ್ಶನವು ಸಮನ್ವಯಗೊಳಿಸುತ್ತಿದೆ ... ಆತ್ಮದಿಂದ ಎಲ್ಲಾ ಕೊಳೆಯನ್ನು ತೊಳೆಯುತ್ತದೆ !! ಮಾತಾ ವೈಷ್ಣೋ ದೇವಿಯ ಚರಣ ಕಮಲದಲ್ಲಿರಲು ಆಶಿರ್ವಾದ ಪಡೆದಿದ್ದೇನೆ" ಎಂದು ಸಿದ್ದು ಟ್ವೀಟ್ ಮಾಡಿದ್ದಾರೆ ಮತ್ತು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನೂಳಿದಂತೆ, ಸಿಎಂ ಚನ್ನಿ ಮಗನ ಮದುವೆಯಲ್ಲಿ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್, ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ, ಒಪಿ ಸೋನಿ, ಸಚಿವರಾದ ಮನ್ ಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದ್ರಾ, ಪರ್ಗತ್ ಸಿಂಗ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಶಾಸಕ ರಾಣಾ ಗುರ್ಮಿತ್ ಸೋಧಿ, ಸಂಸದ ಮನೀಶ್ ತಿವಾರಿ ಸರಳ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.