ಯಡಿಯೂರಪ್ಪ- ಸಿದ್ದರಾಮಯ್ಯ ಭೇಟಿಯೇ ಆದಾಯ ತೆರಿಗೆ ದಾಳಿಗೆ ಮೂಲ ಕಾರಣ | ಜನತಾ ನ್ಯೂಸ್
ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲು ಯಡಿಯೂರಪ್ಪ- ಸಿದ್ದರಾಮಯ್ಯ ಭೇಟಿಯೇ ಕಾರಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ-ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇ ಐಟಿ ರೇಡ್ಗೆ ಕಾರಣ. ಸಿದ್ದರಾಮಯ್ಯ ಪವರ್ಗಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಭೇಟಿ ಕೂಡ ಅದರ ಒಂದು ಭಾಗವಾಗಿದೆ. ಹೇಗಾದರೂ ಸರಿ ಸಿದ್ದರಾಮಯ್ಯಗೆ ಅಧಿಕಾರಬೇಕು. ಈ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ ಮಾಡಿಸಲಾಗಿದೆ. ಐಟಿ ದಾಳಿ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ. ಇದರ ಬಗ್ಗೆ ಅನುಮಾನ ಇಲ್ಲ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಆ ವಿಚಾರ ಗೊತ್ತಾಗಿಯೇ ರೈಡ್ ಮಾಡಿಸಿರುವುದು. ಇದು ದೆಹಲಿಯಿಂದ ಆಗಿರುವುದು, ರಾಜ್ಯದಲ್ಲೂ ಅವರದ್ದೇ ಸರಕಾರವಿದೆ, ಕೇಂದ್ರದಲ್ಲೂ ಅವರದ್ದೇ ಸರಕಾರವಿದೆ. ತನಿಖಾ ದಳಗಳು ಅವರ ಸುಪುರ್ದಿಯಲ್ಲೇ ಇರುವುದರಿಂದ, ಅವರನ್ನು (ಬಿಎಸ್ವೈ) ತಮ್ಮ ನಿಯಂತ್ರಣದಲ್ಲಿ ಇರಿಸಲು ಈ ದಾಳಿ ನಡೆದಿದೆ. ಅವರಿಗೆ (ಕೇಂದ್ರ ಸರಕಾರ), ಅವರದ್ದೇ ಆದ ಮೂಲಗಳು ಇರುತ್ತವೆ. ನಾನು ಎಂದೂ ಯಡಿಯೂರಪ್ಪನವರು ಕ್ಲೀನ್ ಹ್ಯಾಂಡ್ ಎಂದು ಸರ್ಟಿಫಿಕೇಟ್ ನೀಡಿದವನಲ್ಲ ಎಂದು ಕುಮಾರಸ್ವಾಮಿಯವರು ಹೇಳಿದರು.
ಸಿಂಧಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಯಾವಾಗಲೂ 3ನೇ ಸ್ಥಾನದಲ್ಲಿದೆ. ಅಲ್ಲಿ ಬಿಜೆಪಿ, ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲೆಂದೇ ಯೋಚಿಸಿ ಅಭ್ಯರ್ಥಿ ಹಾಕಿದ್ದೇವೆ. ನಮಗೆ ಸರಿ ಎನ್ನಿಸುವವರಿಗೆ ಟಿಕೆಟ್ ಕೊಡುತ್ತೇವೆ. ಸಿದ್ದರಾಮಯ್ಯ ಯಾವ ದೊಣ್ಣೆನಾಯಕ ಎಂದು ಅವರನ್ನು ಕೇಳಿ ಅಭ್ಯರ್ಥಿ ಹಾಕಬೇಕು ಎಂದು ಪ್ರಶ್ನಿಸಿದರು.
ಗ್ರಾಮವೊಂದರಲ್ಲಿ ಜೆಡಿಎಸ್ ಅಭ್ಯರ್ಥಿಗೆ ಊರಿನವರೇ ₹ 50 ಸಾವಿರ ದೇಣಿಗೆ ನೀಡಿ ಹರಸಿದ್ದಾರೆ. ಕಾಂಗ್ರೆಸ್ಗೆ ಅಭ್ಯರ್ಥಿ ಇಲ್ಲದೇ ಇರುವುದರಿಂದ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರ್ಕಾರವನ್ನೇ ತೆಗೆದ ಮಹಾನ್ ನಾಯಕ ಸಿದ್ದರಾಮಯ್ಯ. ನಮ್ಮ ಪಕ್ಷ ಜೆಡಿಎಸ್ ಬಗ್ಗೆ, ನನ್ನ ಬಗ್ಗೆ ಪದೇ ಪದೇ ಕೆಣಕಲು ಬರಬೇಡಿ, ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮೈತ್ರಿ ಸರ್ಕಾರವನ್ನು ಕಿತ್ತೆಸೆದವರು ಇವತ್ತು ನನ್ನ ಬಗ್ಗೆ ಮಾತನಾಡಲು ಏನು ನೈತಿಕ ಹಕ್ಕು ನಿಮಗಿದೆ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ನೀವು ನನ್ನ ಬಗ್ಗೆ ಮಾತನಾಡಬೇಡಿ. ಗೂಟದ ಕಾರಿಗಾಗಿ ನಿಮ್ಮ ಪಕ್ಷದ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು. ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟು ಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಮಂಡ್ಯದಲ್ಲಿ ಜೆಡಿಎಸ್ ದುರ್ಬಲವಾಗಿದೆ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸೇರಿಕೊಂಡು ಮಂಡ್ಯದಲ್ಲಿ ಕುತಂತ್ರದಿಂದ ನಿಖಿಲ್ರನ್ನು ಸೋಲಿಸಿದರು. ಮಹಾಭಾರತದಲ್ಲಿ ಕೌರವರಂತೆ ಚಕ್ರವ್ಯೂಹವನ್ನು ರಚಿಸಿದರು. ಆ ಚಕ್ರವ್ಯೂಹದಲ್ಲಿ ನಿಖಿಲ್ರನ್ನು ಸಿಲುಕಿಸಿ ಸೋಲಿಸಿದ್ದರು. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ. ಸಿದ್ದರಾಮಯ್ಯನವರು ಸ್ವತಃ ಬೆನ್ನು ತಟ್ಟಿಕೊಳ್ಳುವುದು ಬೇಡ ಎಂದು ಕುಟುಕಿದರು.