ಅಪಘಾತವಾಗಿದೆ ಎಂದು ಟ್ರಾಫಿಕ್ ಸೃಷ್ಟಿಸಿ ನೈಸ್ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದವರ ಬಂಧನ! | ಜನತಾ ನ್ಯೂಸ್
ಬೆಂಗಳೂರು : ಅಪಘಾತವಾಗಿದೆ ಎಂದು ಟ್ರಾಫಿಕ್ ಸೃಷ್ಟಿಸಿ ನೈಸ್ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ ಮೂವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ನಂಜೇಗೌಡ ಹಾಗೂ ಸುಬ್ರಮಣ್ಯಪುರ ಠಾಣೆಯ ಇನ್ಸ್ಪೆಕ್ಟರ್ ಕೆ.ಆರ್.ಮಂಜುನಾಥ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುನಿಲ್, ಹರೀಶ್ ಹಾಗೂ ನವೀನ್ ಕುಮಾರ್ನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಮೊಬೈಲ್, ಕ್ರೆಡಿಟ್ ಕಾರ್ಡ್ಗಳು, ಒಂದು ಚಾಕು, 32 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ನಿವಾಸಿ ಶಿವಕುಮಾರ್ ಎಂಬುವರು ಮಾದನಾಯಕಹಳ್ಳಿ ಸಫಾರಿ ಇಂಡಸ್ಟ್ರೀಸ್ ತಯಾರಿಕಾ ಕಂಪೆನಿಯ ವೈರ್ ಹೌಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳು 8 ರಂದು ರಾತ್ರಿ ಕೆಲಸ ಮುಗಿಸಿಕೊಂಡು ತುಮಕೂರು ರಸ್ತೆ ಮೂಲಕ ಕ್ಯಾಂಟರ್ ವಾಹನವೊಂದರಲ್ಲಿ ಮನೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಬನ್ನೇರುಘಟ್ಟ ಬ್ರಿಡ್ಜ್ ಬಳಿ ಬರುವಾಗ ಪ್ರಯಾಣಿಕರ ಸೋಗಿನಲ್ಲಿದ್ದ ಆರೋಪಿಗಳು ಹೊಸೂರಿಗೆ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದರು. ವಾಹನ ಹತ್ತಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಅಸಲಿ ವರಸೆ ತೋರಿಸಿದ ಆರೋಪಿಗಳು ಚಾಕು ತೋರಿಸಿ ಹಲ್ಲೆ ಮಾಡಿ ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಈ ಘಟನೆ ನಡೆದ ಮರುದಿನ ರಾತ್ರಿಯೂ ಇದೇ ಗ್ಯಾಂಗ್ ನವರು ಮತ್ತೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ. ಕೂಡಲೆ ಅವರ ಫೋಟೋ ಹಾಗೂ ಮಾಹಿತಿಯನ್ನು ಸ್ಥಳೀತಯರು ಪೊಲೀಸರಿಗೆ ನೀಡಿದ್ದಾರೆ. ತಕ್ಷಣ ಪೊಲೀಸರು ಆರೋಪಿಗಳು ಬರುತ್ತಿದ್ದ ದಾರಿ ಮಧ್ಯೆ ಅಪಘಾತವಾಗಿದೆ ಎಂದು ಟ್ರಾಫಿಕ್ ಜಾಮ್ ಮಾಡಿದ್ದಾರೆ.
ನಂತರ ಅಲ್ಲಿ ಬಂದ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸಿ ಬೈಕ್, ಡೆಬಿಟ್ ಕಾರ್ಡ್, ಮೊಬೈಲ್ ಜಪ್ತಿ ಮಾಡಲಾಗಿದೆ.