ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಮಹಿಳೆ ಮನೆಗೆ ಭೇಟಿ ನೀಡಿದ ಸುಧಾಕರ್ | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ನ್ಯಾಯಬೆಲೆ ಅಂಗಡಿಯಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನೊಂದ ಮಹಿಳೆ ಮನೆಗೆ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿದ್ದಾರೆ.
ನಿನ್ನೆ ಕಾಟೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಹೋಗಿದ್ದ ದಲಿತ ಸಮುದಾಯದ ಮಹಿಳೆ ನಾರಾಯಣಮ್ಮ, ಅಕ್ಕಿಯಲ್ಲಿ ರಾಗಿ ಮಿಶ್ರಣವಾಗಿದೆ. ಹೀಗಾಗಿ ನನಗೆ ಈ ಅಕ್ಕಿ ಬೇಡ ಎಂದು ವಾದ ಮಾಡಿ ಚೆಲ್ಲಿದ್ದಾರೆ. ಈ ಸಂಬಂಧ ಪಡಿತರ ವಿತರಣೆ ಮಾಡುತ್ತಿದ್ದ ಪದ್ಮಾವತಮ್ಮ ಹಾಗೂ ನಾರಾಯಣಮ್ಮ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಈ ಘಟನೆಯಾದ ನಂತರ ನಾರಾಯಣಮ್ಮ ಮಗ ಸೆಲ್ಫಿ ವೀಡಿಯೋ ಮಾಡಿ ಪದ್ಮಾವತಮ್ಮ ನನ್ನ ಪ್ರಶ್ನೆ ಮಾಡಿದ್ದು, ಈ ವೇಳೆ ಅನಕ್ಷರಸ್ಥಳಾದ ಪದ್ಮಾವತಮ್ಮ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದ್ದಳು. ಇದೇ ವೀಡಿಯೋವನ್ನ ನಾರಾಯಣಮ್ಮ ಮಗ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ಈ ವೀಡಿಯೋ ವೈರಲ್ ಆಗಿತ್ತು.
ಕಾಟೇನಹಳ್ಳಿಯಲ್ಲಿ ಮಹಿಳೆ ಮನೆಗೆ ಭೇಟಿ ನೀಡಿ ಸುಧಾಕರ್ ಮಹಿಳೆಗೆ ಸಮಾಧಾನ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿಯಲ್ಲಿ ಘಟನೆ ನಡೆದಿತ್ತು. ಸಚಿವ ಡಾ.ಸುಧಾಕರ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಕಾನೂನು ಕ್ರಮಕ್ಕೆ ಅಧಿಕಾರಿಗಳಿಗೆ ಸುಧಾಕರ್ ಸೂಚನೆ ಕೊಟ್ಟಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲಕಿ ಪದ್ಮಾವತಿ ವಿರುದ್ಧ ಆರೋಪ ಕೇಳಿಬಂದಿದೆ. ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಮಾಹಿತಿ ಸಿಕ್ಕಿದ್ದು, ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಮಾಡಲಾಗಿದೆ ಎನ್ನಲಾಗಿದೆ.