ಟಿಪ್ಪರ್ - ಕಾರು ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಮೃತ್ಯು, ನಾಲ್ವರಿಗೆ ಗಂಭೀರ ಗಾಯ | ಜನತಾ ನ್ಯೂಸ್
ಚಾಮರಾಜನಗರ : ಟಿಪ್ಪರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಬೇಗೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ನಡೆದಿದೆ.
ಮೈಸೂರು ಕಡೆಯಿಂದ ಇನೋವಾ ಕಾರು ಬಂದಿದ್ದು, ಅದರ ಮುಂದೆ ಮರಳು ತುಂಬಿದ ಟಿಪ್ಪರ್ ಸಂಚರಿಸಿದೆ. ಈ ವೇಳೆ ಬೇಗೂರಿನ ಸಮೀಪದ ಟಿ.ಬಿ. ಸರ್ಕಲ್ ಹತ್ತಿರ ಮುಂದೆ ಹೋಗುತ್ತಿದ್ದ ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಇಂಡಿಕೆಟರ್ ಹಾಕದೆ ಏಕಾಏಕಿ ಬಲಕ್ಕೆ ತಿರುಗಿಸಿದೆ.
ಆ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತರು ಎಂದು ತಿಳಿದುಬಂದಿದೆ. ವಿಜೇಶ್, ಜೀತು, ಸುಲೈಮಾನ್ ಹಾಗೂ ಜೋವನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.