ಪತ್ನಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಲೇ ಜೈಲು ವಾರ್ಡನ್ ಆತ್ಮಹತ್ಯೆ! | ಜನತಾ ನ್ಯೂಸ್
ಶಿವಮೊಗ್ಗ: : ಪತ್ನಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಲೇ ಜೈಲು ವಾರ್ಡನ್ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ಈತ ಮೂಲತಃ ಬೆಳಗಾವಿ ಜಿಲ್ಲೆಯ ಹೊಸೂರು ಗ್ರಾಮದವರು. ಹುಕ್ಕೇರಿ ತಾಲೂಕು ಹೊಸೂರಿನ ಬಾಬು ದಸ್ತಗಿರ್ ತಗರಿ ಎಂಬುವರ ಪುತ್ರ ಅಸ್ಪಾಕ್ ತಗಡಿ(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ..
ಈ ಹಿಂದೆ ಬೆಂಗಳೂರಿನ ಕೆಎಸ್ಆರ್ಪಿಯಲ್ಲಿ ಪೇದೆಯಾಗಿದ್ದ ಅಸ್ಪಾಕ್, ಕಳೆದ ಎರಡು ವರ್ಷದಿಂದ ಜೈಲು ವಾರ್ಡನ್ ಆಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಅಸ್ಪಾಕ್ ತಮ್ಮ ಪಕ್ಕದೂರಿನ ಯರನಾಳು ಗ್ರಾಮದ ರಾಜೇಸಾಬ್ ಎಂಬುವರ ಮಗಳನ್ನು ವಿವಾಹವಾಗಿದ್ದರು. ಅಸ್ಪಾಕ್ಗೆ ಪತ್ನಿ 20 ದಿನಗಳ ಹಿಂದೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ 40 ದಿನಕ್ಕೆ ಗಂಡನ ಮನೆಗೆ ಬರುವ ಶಾಸ್ತ್ರ ಮಾಡುವ ಸಲುವಾಗಿ ಹೆಂಡತಿಯೊಂದಿಗೆ ಮಾತನಾಡುವಾಗ ಜಗಳವಾಗಿದೆ.
ಆ ಸಂದರ್ಭದಲ್ಲಿ ಅತ್ತೆ-ಮಾವನ ಜತೆ ಜಗಳವಾಡಿದ್ದರು. ವಿಡಿಯೋ ಕಾಲ್ನಲ್ಲಿಯೇ ಜಗಳ ಜೋರಾಗಿ ನಡೆದಿತ್ತು. ಹತಾಶಗೊಂಡ ಅಸ್ಪಾಕ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು.
ಕಿಟಕಿ ಬಳಿ ಮೊಬೈಲ್ ಇಟ್ಟು ವಿಡಿಯೋ ಕರೆ ಮಾಡಿ ನಂತರ ಹೆಂಡತಿಯೊಂದಿಗೆ ಮಾತನಾಡುತ್ತಲೇ ಅಸ್ಪಾಕ್ ನೇಣಿಗೆ ಶರಣಾಗಿದ್ದಾರೆ. ತಕ್ಷಣ ಅವರು ಶಿವಮೊಗ್ಗದಲ್ಲಿನ ಅಸ್ಪಾಕ್ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಜೈಲು ಸಿಬ್ಬಂದಿ ಬಂದು ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಸ್ಪಾಕ್ ಮೃತಪಟ್ಟಿದ್ದರು ಎನ್ನಲಾಗಿದೆ.
ಕಣ್ಣೆದುರೇ ನೇಣಿಗೆ ಶರಣಾದ ಪತಿಯ ಸಾವಿನಿಂದ ಅಸ್ಪಾಕ್ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.