ಮನೆ ಬಾಡಿಗೆ ಕಟ್ಟಲು ಇಟ್ಟಿದ್ದ ಹಣದಲ್ಲಿ ಒಡವೆ ಖರೀದಿಸಿದ ಪತ್ನಿ, ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ | ಜನತಾ ನ್ಯೂಸ್
ಬೆಂಗಳೂರು : ಮನೆ ಬಾಡಿಗೆಗೆ ಎತ್ತಿಟ್ಟಿದ್ದ ಹಣದಲ್ಲಿ ಆಭರಣ ಖರೀದಿಸಿದ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದ್ದು, ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಯಾನಂದ ನಗರದಲ್ಲಿ ವಾಸವಿದ್ದ ನಾಜೀಯಾ ಕೊಲೆಯಾದ ಮಹಿಳೆ. ಆಟೋ ಚಾಲಕನಾದ ಫಾರೂಕ್ ಬಂಧಿತ ಪತಿ. ಇವರಿಗೆ ಮೂರು ಮಕ್ಕಳಿದ್ದಾರೆ.
ಬಾಡಿಗೆ ಆಟೋ ಓಡಿಸುತ್ತಿದ್ದ ಫಾರುಖ್ ಮತ್ತು ಪತ್ನಿ ನಾಜೀಯ 2 ವರ್ಷದಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಾರದ ಹಿಂದೆ ಫಾರುಖ್ ಪತ್ನಿಗೆ ಬಾಡಿಗೆ ಕೊಡಲು ಇಟ್ಟುಕೊಳ್ಳುವಂತೆ 6,500 ರೂ. ಹಣ ಕೊಟ್ಟಿದ್ದ. ಆದರೆ ಆ ಹಣದಲ್ಲಿ ನಾಜೀಯ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿಸಿ ಖರ್ಚು ಮಾಡಿಕೊಂಡಿದ್ದಳು.
ನ. 2 ರಂದು ಮನೆ ಬಾಡಿಗೆ ಕಟ್ಟಲು ಪತಿ ಹಣ ಕೇಳಿದಾಗ, ನಾಜೀಯಾ ಆಭರಣ ಖರೀದಿಸಿರುವುದು ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಫಾರೂಕ್ ಪತ್ನಿಯನ್ನ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಗಲಾಟೆ ವೇಳೆ ಫಾರುಕ್, ಪತ್ನಿ ನಾಜೀಯಾಗೆ ಕೈಯಿಂದ ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಜಜ್ಜಿದ್ದ. ಹಲ್ಲೆಯಿಂದ ಗಾಯಗೊಂಡ ಪತ್ನಿಯ ಸ್ಥಿತಿ ಗಂಭೀರವಾಗಿತ್ತು.
ತಕ್ಷಣ ಪತ್ನಿಯನ್ನು ಫಾರೂಕ್ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದ. ಆದರೆ ಎರಡು ಆಸ್ಪತ್ರೆಗಳಲ್ಲಿ ನಾಜೀಯಾ ಅವರನ್ನು ದಾಖಲು ಮಾಡಿಕೊಂಡಿಲ್ಲ ಎನ್ನಲಾಗಿದೆ. ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದ್ದು, ಆ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ನಾಜೀಯಾ ಪ್ರಾಣ ಬಿಟ್ಟಿದ್ದಳು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಫಾರೂಕ್ನನ್ನು ಬಂಧಿಸಿದ್ದಾರೆ.