ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ : ಆನಂದ ಮಹಿಂದ್ರಾ ಅವರಿಗೆ ಪದ್ಮಭೂಷಣ | ಜನತಾ ನ್ಯೂಸ್
ನವದೆಹಲಿ : ಹಣ್ಣುಗಳನ್ನು ಮಾರಿ ದುಡಿದ ತಮ್ಮ ಸಂಪಾದನೆಯಿಂದ ಗ್ರಾಮದಲ್ಲಿ ಶಾಲೆ ಕಟ್ಟಿದ ರಾಜ್ಯದ ಮಂಗಳೂರಿನ ಹಣ್ಣಿನ ವ್ಯಾಪಾರಿ ಹರೇಕಳ ಹಾಜಬ್ಬ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಸಾರ್ವಜನಿಕವಾಗಿ ಶ್ಲಾಘನೆಗೆ ಪಾತ್ರವಾಗಿದೆ.
ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ಮಂಗಳೂರಿನ ಹಣ್ಣಿನ ವ್ಯಾಪಾರಿ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಶ್ರೇಷ್ಠ ನಾಗರೀಕ ಪ್ರಶಸ್ತಿ ಪ್ರದಾನವಾಯಿತು.
ನಾನು ಶಿಕ್ಷಣವನ್ನು ಪಡೆಯಲಿಲ್ಲ. ಇದರಿಂದ ನನ್ನ ಹಳ್ಳಿಯ ಪ್ರತಿ ಮಗುವೂ ಶಿಕ್ಷಣ ಪಡೆಯಬೇಕು ಎಂಬ ಕನಸಿನೊಂದಿಗೆ ಶಾಲೆ ನಿರ್ಮಿಸಲು ಕಾರಣವಾಯಿತು. ಇಂದು ಶಾಲೆಯಲ್ಲಿ 175 ವಿದ್ಯಾರ್ಥಿಗಳು 10ನೇ ತರಗತಿವರೆಗೆ ಓದುತ್ತಿದ್ದಾರೆ, ಎಂದು ಹರೇಕಳ ಹಾಜಬ್ಬ ಹೇಳಿದ್ದಾರೆ.
ಇಂದಿನ ಸಮಾರಂಭದಲ್ಲಿ, ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿ ಅಧ್ಯಕ್ಷ ಆನಂದ ಮಹಿಂದ್ರಾ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಅವರ ಪುತ್ರ ಉತ್ಪಲ್ ಪರಿಕ್ಕರ್ ಸ್ವೀಕರಿಸಿದರು.