ರಾಮಮಂದಿರದ ಬದಲು ಆಸ್ಪತ್ರೆ ನಿರ್ಮಿಸಬೇಕು ಎಂದ ಕೇಜ್ರಿವಾಲ್ ಈಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ - ಸಿ.ಟಿ.ರವಿ | ಜನತಾ ನ್ಯೂಸ್
ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರದ ಬದಲು ಆಸ್ಪತ್ರೆ ನಿರ್ಮಿಸಬೇಕು, ಎಂದವರು ಈಗ ಪ್ರತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಮ್ ಆದ್ಮಿ ಪಾರ್ಟಿ(ಆಪ್) ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಗೋವಾ ರಾಜ್ಯದಲ್ಲಿ ದೆಹಲಿಯಲ್ಲಿ ತರಲಾಗಿರುವ ಸುಧಾರಣೆಯನ್ನು ಗೋವಾದಲ್ಲಿಯೂ ತರಲಾಗುವುದು ಎಂದು ಕೆಜ್ರಿವಾಲ್ ಹೇಳಿದ್ದರು. ಹಾಗೂ ಇತ್ತೀಚಿಗೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಆಪ್ ಮುಖ್ಯಸ್ಥರ ವಿರುದ್ಧ, ಗೋವಾ ರಾಜ್ಯದ ಬಿಜೆಪಿ ವಸ್ತುವಾರಿ ಹೊತ್ತಿರುವ ಸಿ.ಟಿ.ರವಿ ಅವರು ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಅವರು ಗೋವಾದ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿನ ಮಾಲಿನ್ಯದ ಬಗ್ಗೆ ಅವರು ಏನು ಮಾಡಿದರು ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ? ಮಾಲಿನ್ಯದಿಂದಾಗಿ ದೆಹಲಿಯ ಜನರು ಪ್ರತಿ ವರ್ಷ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ಪ್ರವಾಹಕ್ಕೆ ಸಿಲುಕಿದೆ. ಅವರು ಏನು ಮಾಡಿದ್ದಾರೆ? ಅವರ ಪ್ಲಾನ್(ದೆಹಲಿಯಲ್ಲಿ) ಏನು?, ಎಂದು ಸಿ.ಟಿ.ರವಿ ಸವಾಲೆಸೆಗಿದ್ದಾರೆ.
ಇಂದು ಪ್ರತಿ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ. ರಾಮಮಂದಿರದ ಬದಲು ಆಸ್ಪತ್ರೆ(ಅಯೋಧ್ಯೆಯಲ್ಲಿ) ನಿರ್ಮಿಸಬೇಕು ಎಂದು ಅವರು ಈ ಹಿಂದೆ ಹೇಳುತ್ತಿದ್ದರು. ನಾವು ಚುನಾವಣಾ ಹಿಂದೂಗಳಲ್ಲ. ನಾವು ನಾಟಕ ಮಾಡುವುದಿಲ್ಲ. ಮತದಾನದ ಸಮಯದಲ್ಲಿ ನಾವು ಬಣ್ಣ ಬದಲಾಯಿಸುವುದಿಲ್ಲ. ಗೋವಾದಲ್ಲಿ ಬಿಜೆಪಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ, ಎಂದು ಸಿ.ಟಿ.ರವಿ ಅವರು ಕೇಜ್ರಿವಾಲ್ ಅವರನ್ನು ಲೇವಡಿ ಮಾಡಿದ್ದಾರೆ.