ಇನ್ಸ್ಪೆಕ್ಟರ್ ಮೇಲೆಯೇ ಹಲ್ಲೆಗೆ ಯತ್ನ, ಕೊಲೆ ಆರೋಪಿಗೆ ಗುಂಡೇಟು | ಜನತಾ ನ್ಯೂಸ್
ಬೆಂಗಳೂರು : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಾಗ ಹಲ್ಲೆ ನಡೆಸಲು ಮುಂದಾದ ಹಿನ್ನೆಲೆ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.
ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವರು ಎರಡು ದಿನಗಳ ಹಿಂದೆ ಕಾರಿನಲ್ಲಿ ನಾಗವಾರ ಸರ್ವೀಸ್ ರಸ್ತೆ ಕಡೆಗೆ ಹೋಗುವಾಗ ರಘು ಹಾಗೂ ಆತನ ಸಹಚರರು ಅಡ್ಡಗಟ್ಟಿದ್ದರು. ಈ ವೇಳೆ, ತಪ್ಪಿಸಿಕೊಂಡು ಹೋಗುವಾಗ ಬೆನ್ನಟ್ಟಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.. ಹೆಣ್ಣೂರು ಪೊಲೀಸರು ಕಾಲಿಗೆ ಗುಂಡೇಟು ಹೊಡೆದು ಆರೋಪಿಯನ್ನ ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನ ಜಪ್ತಿ ಮಾಡಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಪಿಎಸ್ಐ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ.
ಹೀಗಾಗಿ ಇನ್ಸ್ಪೆಕ್ಟರ್ ವಸಂತ್ ಆರೋಪಿ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ರಾಮಮೂರ್ತಿನಗರ ಹೆಣ್ಣೂರು ರಸ್ತೆಯಲ್ಲಿ ಘಟನೆ ನಡೆದಿದೆ. ಸದ್ಯ ಗಾಯಗೊಂಡಿರುವ ಆರೋಪಿ ರಘುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಹೆಣ್ಣೂರು ಪೊಲೀಸ್ ಠಾಣೆ ಪಿಎಸ್ಐ ಲಿಂಗರಾಜ್ ಎಂಬುವರು ಗಾಯಗೊಂಡಿದ್ದಾರೆ.