ಶ್ರೀಕಿ ಎನ್ಕೌಂಟರ್ ಸಾಧ್ಯತೆ: ಕಾಂಗ್ರೆಸ್ ವಕ್ತಾರ | ಜನತಾ ನ್ಯೂಸ್
ಬೆಂಗಳೂರು : ಬಿಟ್ಕಾಯಿನ್ ಹಗರಣ ಸಂಬಂಧ ಪ್ರಕರಣದ ರೂವಾರಿ ಎನಿಸಿಕೊಂಡಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಎನ್ಕೌಂಟರ್ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ಪ್ರದೇಶ ಪೊಲೀಸರಿಂದ ಎನ್ ಕೌಂಟರ್ ಗೆ ಬಲಿಯಾದ ವಿಕಾಸ್ ದುಬೆ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಕೆಪಿಸಿಸಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ, ಶ್ರೀಕಿಯನ್ನು ಪೊಲೀಸರು ಎನ್ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಉತ್ತರ ಪ್ರದೇಶದ ಅಪರಾಧಗಳಲ್ಲಿ ತನ್ನ ಪಾತ್ರ ಬಹಿರಂಗವಾಗದಂತೆ ಅಲ್ಲಿನ ಬಿಜೆಪಿ ಸರ್ಕಾರ ಪೊಲೀಸ್ ಎನ್ಕೌಂಟರ್ ಮುಖೇನ ಆರೋಪಿ ವಿಕಾಸ್ ದುಬೆಯ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ ಬಿಟ್ಕಾಯಿನ್ ಸ್ಕ್ಯಾಂಡಲ್ನ ಪ್ರಮುಖ ಆರೋಪಿ ಶ್ರೀಕಷ್ಣ @ ಶ್ರೀಕಿಯ ಪೊಲೀಸ್ ಎನ್ಕೌಂಟರ್ ಮಾಡುವ ಸಾಧ್ಯತೆ ಇದೆ" ಎಂದು ಸಂಕೇತ್ ಏಣಗಿ ಟ್ವೀಟ್ ಮಾಡಿದ್ದಾರೆ.
ಶ್ರೀಕಿಯ ಸುತ್ತಲೇ ಬಿಟ್ ಕಾಯಿನ್ ಪ್ರಕರಣ ಗಿರಕಿ ಹೊಡೆಯುತ್ತಿದೆ. ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಉಜ್ಜಯಿನಿಯಲ್ಲಿ ಬಂಧಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕಾರ್ ಕಾನ್ಪುರದ ಬಳಿ ಪಲ್ಟಿಯಾಗಿತ್ತು.
ಈ ವೇಳೆ ವಿಕಾಸ್ ದುಬೆ ಪೊಲೀಸರ ಬಳಿ ಇದ್ದ ಗನ್ ಕಿತ್ತುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಅದೇ ರೀತಿ ಶ್ರೀಕಿಯನ್ನು ಎನ್ಕೌಂಟರ್ ಮಾಡುವ ಸಾಧ್ಯತೆಯಿದೆ ಎಂದು ಆತಂಕವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"ಬಿಟ್ಕಾಯಿನ್ ಹಗರಣದ ಸೂತ್ರದಾರನೆನ್ನಲಾದ ಶ್ರೀಕೃಷ್ಣ/ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಷಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದರು.