ಟಿಎಂಸಿ ಶಾಸಕರನ್ನು ಬಂಧಿಸಿದಕ್ಕಾಗಿ ಸಿಬಿಐ, ಇಡಿ ವಿರುದ್ಧ ವಿಶೇಷಾಧಿಕಾರದ ನಿರ್ಣಯ ಮಂಡನೆ | ಜನತಾ ನ್ಯೂಸ್
ಕೊಲ್ಕೊತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತ್ರತ್ವದ ಆಡಳಿತರೂಡ ತೃಣ ಮೂಲ ಕಾಂಗ್ರೆಸ್(ಟಿಎಂಸಿ) ಶಾಸಕರನ್ನು ಬಂಧಿಸಿದಕ್ಕಾಗಿ ಕೇಂದ್ರ ತನಿಖಾ ದಳ(ಸಿಬಿಐ)ದ ಇಬ್ಬರು ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ವಿರುದ್ಧ ಬುಧವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿಶೇಷಾಧಿಕಾರದ ನಿರ್ಣಯವನ್ನು ಮಂಡಿಸಲಾಯಿತು.
ನಾರದ ಕುಟುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಟಿಎಂಸಿ ಶಾಸಕರನ್ನು ಬಂಧಿಸುವ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದ ಘನತೆ ಕಡಿಮೆ ಮಾಡಿದ ಆರೋಪ ಸಿಬಿಐ ಮತ್ತು ಇಡಿ ಇಬ್ಬರು ಅಧಿಕಾರಿಗಳ ವಿರುದ್ಧ ವಿಶೇಷಾಧಿಕಾರದ ನಿರ್ಣಯ ಮಂಡನೆ ಮಾಡಲಾಗಿದೆ.
ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಕುರಿತು ಮಾತನಾಡಿದ್ದು, "ಪ್ರಸ್ತಾವನೆಯನ್ನು ಪಶ್ಚಿಮ ಬಂಗಾಳದ ಅಸೆಂಬ್ಲಿಯಲ್ಲಿ ಧ್ವನಿ ಮತದೊಂದಿಗೆ ಅಂಗೀಕರಿಸಲಾಗಿದೆ ಮತ್ತು ವಿಶೇಷಾಧಿಕಾರ ಸಮಿತಿಗೆ ಕಳುಹಿಸಲಾಗಿದೆ, ಅಲ್ಲಿ ಬಿಜೆಪಿ ಸದಸ್ಯರ ಪ್ರಬಲ ವಿರೋಧವನ್ನು ನೋಡುತ್ತದೆ. ಬಹುತೇಕ ಎಲ್ಲ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಟಿಎಂಸಿಗೆ ಸಿಬಿಐ ಮತ್ತು ಇಡಿ ಅಂದರೆ ಭಯ," ಎಂದು ಹೇಳಿದ್ದಾರೆ.
ಪ್ರಸ್ತಾವನೆಯನ್ನು ಮಂಡಿಸಿದ ಟಿಎಂಸಿ ಶಾಸಕ ಮತ್ತು ಸಚಿವ ತಪಸ್ ರಾಯ್, ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ಆಡಳಿತ ಪಕ್ಷದ ಮೂವರು ಶಾಸಕರಾದ ಫಿರ್ಹಾದ್ ಹಕೀಮ್, ಮದನ್ ಮಿತ್ರ ಮತ್ತು ಸುಬ್ರತಾ ಮುಖರ್ಜಿ ಅವರನ್ನು ಕೇಂದ್ರ ತನಿಖಾ ದಳ(ಸಿಬಿಐ) ಬಂಧಿಸಿತ್ತು. ಆದರೆ ಯಾರೊಬ್ಬರೂ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರ ಅನುಮತಿ ಕೇಳಲಿಲ್ಲ ಅಥವಾ ಅದರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ, ಎಂದು ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯ(ಇಡಿ) ಕೂಡ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.