ಬಾಲಕಿ ಮೇಲೆ ಗ್ಯಾಂಗ್ರೇಪ್, ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂಸ್
ಮಂಗಳೂರು : ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ರವಿವಾರ ನಡೆದ 8 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಯ್ ಸಿಂಗ್(21), ಮುಕೇಶ್ ಸಿಂಗ್(20), ಮನೀಶ್ ತಿರ್ಕಿ(33) ಹಾಗೂ ಮುನೀಮ್ ಸಿಂಗ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನೀಶ್ ತಿರ್ಕಿ ಪರಾರಿಯಲ್ಲಿರುವ ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಾಗಿದ್ದರೆ, ಮುನೀಮ್ ಸಿಂಗ್ (20) ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಇವರೆಲ್ಲ ಸ್ನೇಹಿತರಾಗಿದ್ದಾರೆ. ಈ ಪೈಕಿ ಮೂವರು ಮಧ್ಯ ಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ನಿವಾಸಿಗಳಾದರೆ, ಓರ್ವ ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿ. ಆರೋಪಿಗಳಲ್ಲಿ ಇಬ್ಬರಿಗೆ 22 ವರ್ಷ, ಓರ್ವನಿಗೆ 21 ಹಾಗೂ ಇನ್ನೋರ್ವ 33 ವರ್ಷ ಎಂದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪರಾರಿ ಎಂಬಲ್ಲಿಯ ರಾಜ್ಟೈಲ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ವಲಸೆ ಕಾರ್ಮಿಕರ ಪುತ್ರಿ, ಏಕಾಏಕಿ ನಾಪತ್ತೆಯಾಗಿದ್ದಾಳೆ. ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಸಂಜೆ ಹೊತ್ತಿಗೆ ಮಗು ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ನಲ್ಲಿ ಪತ್ತೆಯಾಗಿದೆ. ತಕ್ಷಣ ಬಾಲಕಿಯನ್ನು ಮೇಲಕ್ಕೆತ್ತಿದರೂ ಆಕೆ ಅದಾಗಲೇ ಮೃತಪಟ್ಟಿದ್ದಳು.
ಆರೋಪಿಗಳು ನ.21ರಂದು ಮಧ್ಯಾಹ್ನ ಪರಾರಿಯ ಟೈಲ್ಸ್ ಫ್ಯಾಕ್ಟರಿಯ ಕಂಪೌಂಡ್ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಉಸಿರುಗಟ್ಟಿಸಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
ಈ ಪ್ರಕರಣವನ್ನು ಮಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಪೊಲೀಸ್ ಆಯುಕ್ತ ಶಶಿಕುಮಾರ್ ಅವರು 4 ಪೊಲೀಸ್ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಿರ್ದೇಶನ ನೀಡಿದ್ದರು. ಇದಾದ ಬಳಿಕ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ 20 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನಾಲ್ವರು ಆರೋಪಿಗಳ ಕೃತ್ಯ ಬಯಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.