ಜೆಡಿಎಸ್ ಜತೆ ಹೋಗ್ತೀವಿ ಎನ್ನುವ ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ ಎನ್ನುವುದಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಡಿರುವ ಮಾತು ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಜತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಬಿಜೆಪಿಗೆ ಅದೆಂಥ ದುಸ್ಥಿತಿ ಬಂದಿದೆ ಎಂಬುದನ್ನು ಸಾರುತ್ತಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವೇ ಆಳ್ವಿಕೆಯಲ್ಲಿದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ.
ಜೆಡಿಎಸ್ ಮೇಲೆ ಅವಲಂಬಿತವಾಗಲು ಮುಂದಾಗಿದೆ. ಶಿವಮೊಗ್ಗ ಸೇರಿ ಹಲವೆಡೆ ಅವರ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಬೇಕಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ವಿರುದ್ಧ ಅರುಣ್ ಸಿಂಗ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇವರು ಅವರ ವಿರುದ್ಧ, ಆರ್ಎಸ್ಎಸ್ ವಿರುದ್ಧ ಸಾಕಷ್ಟು ಮಾತನಾಡಿದ್ದಾರೆ. ನಾವು ಮೊದಲಿಂದಲೂ ಬಿಜೆಪಿ ಜೊತೆ ಅಂತರ ಕಾಪಾಡಿಕೊಂಡಿದ್ದೇವೆ.
ಜೆಡಿಎಸ್ ಜೊತೆ ಸಾಕಷ್ಟು ಬಾರಿ ಹೊಂದಾಣಿಕೆ ಮೇಲೆ ಬೆಂಬಲ ಪಡೆದಿದ್ದೇವೆ, ಬೆಂಬಲ ನೀಡಿದ್ದೇವೆ. ಸೋತಿರಬಹುದು, ಇಲ್ಲ ಗೆದ್ದಿರಬಹುದು. ಆದರೆ, ಇಂದು ಬಿಜೆಪಿಗೆ ಜೆಡಿಎಸ್ ಎಷ್ಟು ಅನಿವಾರ್ಯವಾಗಿದೆ ಎನ್ನುವುದನ್ನು ಗಮನಿಸಿದಾಗ ಬಿಜೆಪಿ ದುರ್ಬಲವಾಗಿದೆಯೆಂದು ತಿಳಿಯುತ್ತದೆ ಎಂದರು.