ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ! | ಜನತಾ ನ್ಯೂಸ್
ಮೈಸೂರು : ಬಿಜೆಪಿ ಸಂಸದ ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ ಎಂಬುದಾಗಿ ಹೇಳುವ ಮೂಲಕ, ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರು, ಆರೋಗ್ಯ ಸರಿಯಿಲ್ಲದ ಕಾರಣ ನಾನು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಮೊದಲೆಲ್ಲಾ ಕಾಂಗ್ರೆಸ್ ಜೆಡಿಎಸ್ ನಡುವೆ ಮಾತ್ರ ನೇರ ಸ್ಪರ್ಧೆ ಏರ್ಪಡುತ್ತಿತ್ತು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೌಟಿಲ್ಯ ಗೆಲುವು ಸಾಧಿಸಲಿದ್ದಾರೆ. ರಘು ಕೌಟಿಲ್ಯ ಗೆಲುವಿನ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದರು.
ಅತಿ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಅಧಿಕಾರ ಗಳಿಸಿರುವಂತ ಬಿಜೆಪಿ ಪಕ್ಷಕ್ಕೇ, ಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷದ ಮೈತ್ರಿ ಅಗತ್ಯವಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯೊಂದಿಗೆ ಎಷ್ಟು ಸ್ಥಾನ ಗಳಿಸಿದೆ ಎಂಬುದು ಗೊತ್ತಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ-ಜಿ ಟಿ ದೇವೇಗೌಡ ಹತ್ತಿರವಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜಿ ಟಿ ದೇವೇಗೌಡ ಹೀನಾಯವಾಗಿ ಸೋಲಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದುಕೊಂಡು 36 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.
ಬಾದಾಮಿಯಲ್ಲೂ ಅಲ್ಪ ಮತಗಳಿಂದ ಗೆದ್ದರು. ಇಲ್ಲದಿದ್ದರೆ ಸಿದ್ದರಾಮಯ್ಯನ ಹುಂಡಿಗೆ ಹೋಗಬೇಕಾಗಿತ್ತು. ವಾಸ್ತವ ಹೀಗಿದ್ದರೂ ತಮ್ಮನ್ನು ಹೀನಾಯವಾಗಿ ಸೋಲಿಸಿದ ಜಿ ಟಿ ದೇವೇಗೌಡ ಜೊತೆ ಸಿದ್ದರಾಮಯ್ಯ ಕೈಜೋಡಿಸಿರುವುದು ನಗೆಪಾಟಲಿಗೀಡಾಗಿದೆ, ಹಾಸ್ಯಾಸ್ಪದ ಆಗಿದೆ ಎಂದು ವ್ಯಂಗ್ಯವಾಡಿದರು.