ಪಂಜಾಬ್ನಲ್ಲಿ ಭತ್ತದ ತಳಿಗೆ ದೇವೇಗೌಡ ಹೆಸರು! | ಜನತಾ ನ್ಯೂಸ್
ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಪಂಜಾಬ್ನ ರೈತರು ಅತ್ಯುತ್ತಮ ಭತ್ತದ ತಳಿವೊಂದಕ್ಕೆ "ದೇವೇಗೌಡ" ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.
ಸದನದ ಒಳಗೆ ಮತ್ತು ಹೊರಗೆ ರೈತ ಸಮುದಾಯದ ಪರ ಹೆಚ್.ಡಿ ದೇವೇಗೌಡರಿಗೆ ಇರುವ ಬದ್ಧತೆಯ ಗೌರವಾರ್ಥವಾಗಿ ಅವರ ಹೆಸರನ್ನೇ ಇಟ್ಟಿದ್ದಾರಂತೆ. ಗೌಡರು ಶಾಸಕರಾಗಿ, ಸಂಸದರಾಗಿ ಯಾವತ್ತೂ ಸದನದ ಶಿಷ್ಟಾಚಾರ ಉಲ್ಲಂಘಿಸಿಲ್ಲ.
ಆದರೆ ರೈತರ ಹಿತಕ್ಕೆ ಬೆದರಿಕೆ ಬಂದಾಗ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಈ ಸ್ವಯಂ ಪ್ರೇರಿತ ತತ್ವವನ್ನು ಉಲ್ಲಂಘಿಸಿದ್ದರು ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ತಮ್ಮ "ಫುರೋಸ್ ಇನ್ ಎ ಫೀಲ್ಡ್: ದಿ ಅನ್ಎಕ್ಸ್ಪ್ಲೋರ್ಡ್ ಲೈಫ್ ಆಫ್" (Furrows in a Field: The Unexplored Life of) ಪುಸ್ತಕದಲ್ಲಿ ಬರೆದಿದ್ದಾರೆ.
1991ರ ಜುಲೈ 31 ಮತ್ತು ಆಗಸ್ಟ್ 1ರ ಘಟನೆಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಂದು ಮನಮೋಹನ್ ಸಿಂಗ್ ನೇತೃತ್ವದ ಮೊದಲ ಬಜೆಟ್ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು.
ಅಂದು ಸದನದ ಬಾವಿಗಿಳಿದ ದೇವೇಗೌಡರು, ನಾನೊಬ್ಬ ರೈತ. ಭೂಮಿ ಉಳುವವನ ಮಗ. ರೈತರಿಗೆ ಸಬ್ಸಿಡಿಗಳನ್ನು ಕೊನೆಗೊಳಿಸುವ ನಿರ್ಧಾರವನ್ನು ಸರ್ಕಾರ ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ನಿರ್ಧಾರವನ್ನ ಒಪ್ಪುವುದಿಲ್ಲ. ಹಿಂಪಡೆಯುವವರೆಗೂ ಸದನದಿಂದ ಹೊರಗೆ ಹೋಗಲ್ಲ ಎಂದಯ ಪಟ್ಟು ಹಿಡಿದು ಕೂತಿದ್ದರ ಬಗ್ಗೆ ಪ್ರಸ್ತಾಪಿಸಲಾಗಿದೆ.
2002 ರಲ್ಲಿ, ಭಾರತದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆಗಳು ವರದಿಯಾದಾಗ, ಗೌಡರು ಕರ್ನಾಟಕದಿಂದ ಸುಮಾರು 2,000 ರೈತರ ನಿಯೋಗವನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದರು.
ಇದು ಅಭೂತಪೂರ್ವವಾಗಿದೆ. ವಿಶೇಷವಾಗಿ ಮಾಜಿ ಪ್ರಧಾನಿಯೊಬ್ಬರು ಈ ರೀತಿ ಪ್ರತಿಭಟಿಸಿದರು. ದೆಹಲಿಯ ಜನರು ದಿಗ್ಭ್ರಮೆಗೊಂಡರು, ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದ ಪುಸ್ತಕದಲ್ಲಿ ಹೇಳಲಾಗಿದೆ. ರೈತರ ಪರ ಗೌಡರಿಗಿದ್ದ ಬದ್ಧತೆಗಾಗಿ ಪಂಜಾಬ್ನ ರೈತರು ಅತ್ಯುತ್ತಮ ಭತ್ತದ ತಳಿಗಳಲ್ಲಿ ಒಂದಕ್ಕೆ ಗೌಡರ ಹೆಸರಿಟ್ಟಿದ್ದಾರೆ.