ನಾನು ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ: ಡಿಕೆಶಿಗೆ ಸಿ.ಟಿ.ರವಿ | ಜನತಾ ನ್ಯೂಸ್
ಚಿಕ್ಕಮಗಳೂರು : ನಾನು ದೇಶಭಕ್ತಿ ಸಂಘಟನೆ ಆರ್ಎಸ್ಎಸ್ನ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ. ಕೊತ್ವಾಲ್ ರಾಮಚಂದ್ರನ ಚೇಲಾಗಳು ಆದವರಿಗೆ ಉಳಿದವರು ಹಾಗೇ ಕಾಣುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೂಟಿ ರವಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತೆ ಟಾಂಗ್ ನೀಡಿದ್ದಾರೆ.
ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ದತ್ತ ಮಾಲಾಧಾರಿಗಳಿಗೆ ದತ್ತ ಪಾದುಕೆ ದರ್ಶನ ನೀಡಲಾಯಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ ಮಾಲಾಧಾರಿಗಳು, ಭಕ್ತರು ಬೆಳಗ್ಗೆ 8 ಗಂಟೆಯಿಂದ ದತ್ತ ಪಾದುಕ್ಕೆ ದರ್ಶನ ಮಾಡಿದ್ದರು. ಸಿ.ಟಿ ರವಿ ಅವರು ಹೊನ್ನಮ್ಮನಹಳ್ಳದಿಂದ ಪಾದಯಾತ್ರೆ ಮೂಲಕ ದತ್ತಪೀಠಕ್ಕೆ ಆಗಮಿಸಿದರು.
ಕೊತ್ವಾಲ್ ರಾಮಚಂದ್ರನ ಚೇಲಾ ಆದವರಿಗೆ ಉಳಿದವರೂ ಹಾಗೇ ಕಾಣುತ್ತಾರೆ. ನಾನು ಶಾಸಕನಾದ ಮೇಲೆ ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಅಕ್ರಮ ಸಂಪತ್ತು ಮಾಡಿಕೊಂಡು ಜೈಲು-ಬೇಲು ಕಂಡವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ, ನಾನು ದತ್ತಪೀಠ-ಜನಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ,ಹಣ ಲೂಟಿ ಮಾಡಿ, ಇನ್ನೊಬ್ಬರ ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ.ಅಕ್ರಮ ಸಂಪತ್ತು ಗಳಿಸಿ ಜೈಲಿಗೆ ಹೋಗಿರುವ, ಬೇಲ್ ನಲ್ಲಿರುವ ಯಾವುದೇ ಕುಖ್ಯಾತಿ ನನಗಿಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.