ಸೊಸೆ ಐಶ್ವರ್ಯ ವಿಚಾರಣೆ ನಡೆಸಿದ ಇಡಿ : ರಾಜ್ಯಸಭೆಯಲ್ಲಿ ಮಿತಿಮೀರಿ ಕೊಪ ಹೊರಹಾಕಿದ ಜಯಾ ಬಚ್ಚನ್ | ಜನತಾ ನ್ಯೂಸ್
ನವದೆಹಲಿ : ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ನಿನ್ನೆ ಡಿಸೆಂಬರ್ 20ರಂದು ಮೇಲ್ಮನೆಯಲ್ಲಿ ಕೋಪದಿಂದ ತಮ್ಮ ಮಾತಿನ ಹತೋಟಿ ತಪ್ಪಿದ ಘಟನೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಅವರನ್ನು ಪನಾಮಾ ಪೇಪರ್ ಹಗರಣಕ್ಕೆ ಸಂಬಂಧಪಟ್ಟ ಹಾಗೆ ಜಾರಿ ನಿರ್ದೇಶನಾಲಯ(ಇಡಿ) ರಾಷ್ಟ್ರ ರಾಜಧಾನಿಯಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲೇ, ನಿನ್ನೆ ರಾಜ್ಯಸಭೆಯಲ್ಲಿ ಕೋಪದಿಂದ ಅಲ್ಲೋಲಕಲ್ಲೋಲವಾದ ಜಯಾ ಬಚ್ಚನ್ ಅವರು ಬಿಜೆಪಿ ಸಂಸದರಿಗೆ ಕೆಟ್ಟ ದಿನಗಳು ಬರಲಿ ಎಂದು ಶಾಪ ಕೂಡ ಹಾಕಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ನಿನ್ನೆ ಮೇಲ್ಮನೆಯಲ್ಲಿ, ಅವರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್(ತಿದ್ದುಪಡಿ) ಮಸೂದೆ, 2021 ರ ಚರ್ಚೆಯಲ್ಲಿ ಭಾಗವಹಿಸಬೇಕಾಗಿತ್ತು. ಆ ವೇಳೆ ಭುವನೇಶ್ವರ್ ಕಲಿತಾ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತಿದ್ದರು. ಜಯಾ ಬಚ್ಚನ್ ಅವರನ್ನು ಗೌರವಾನ್ವಿತ ಸದಸ್ಯ ಎಂದು ಕರೆಯುವ ಮೂಲಕ ತಮ್ಮ ವಿಷಯವನ್ನು ಪುನರುಚ್ಚರಿಸಲು ಅವರು ಕೇಳಿಕೊಂಡರು.
ಈ ಕುರಿತು ಮಾತನಾಡಿದ ಜಯಾ ಬಚ್ಚನ್ ಅವರು, "ನೀವು ನನ್ನನ್ನು ಗೌರವಾನ್ವಿತ ಎಂದು ಕರೆದಿದ್ದಕ್ಕಾಗಿ ಧನ್ಯವಾದಗಳು, ಆದರೆ ನೀವು ನನ್ನನ್ನು ನಿಜವಾಗಿಯೂ ಗೌರವಾನ್ವಿತ ಎಂದು ಪರಿಗಣಿಸಿದರೆ, ನನ್ನ ಮಾತನ್ನು ಎಚ್ಚರಿಕೆಯಿಂದ ಆಲಿಸಿ. ನಮಗೆ ನ್ಯಾಯ ಬೇಕು. ನಾವು ಅವರಿಂದ (ಸರ್ಕಾರ) ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಆದರೆ ನಾವು ನಿಮ್ಮಿಂದ ಸಾಧ್ಯವೇ? ಸದನದ ಸದಸ್ಯರು ಹಾಗೂ ಹೊರಗೆ ಕುಳಿತಿರುವ 12 ಮಂದಿಗೆ ಏನು ಮಾಡುತ್ತಿದ್ದೀರಿ?" ಎಂದು ಕೂಗಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಭುವನೇಶ್ವರ್ ಕಲಿತಾ ಅವರು ಮಧ್ಯ ಮಾತನಾಡಿ ಮಾದಕ ದ್ರವ್ಯ ಮಸೂದೆಗೆ ಬಗ್ಗೆ ನೀವು ಮಾತನಾಡಬೇಕಿತ್ತು ಎಂದು ಜಯಾ ಅವರಿಗೆ ನೆನಪಿಸುತ್ತಿದ್ದಂತೆ, ಕೋಪಗೊಂಡ ಜಯಾ ಬಚ್ಚನ್, "ನೀವು ಮಾತನಾಡಬೇಡಿ, ಇದು ನನಗೆ ಮಾತನಾಡುವ ಅವಕಾಶ.. ಏಕೆ ಮಾತನಾಡುತ್ತಿದ್ದೀರಿ? ಇಷ್ಟು ದೊಡ್ಡ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಲ್ಲಿ 3-4 ಗಂಟೆಗಳ ಕಾಲಾವಕಾಶ ನೀಡಿದ್ದು, ಕೇವಲ ಕ್ಲೆರಿಕಲ್ ದೋಷದ ಬಗ್ಗೆ ಚರ್ಚಿಸಲು ಮಾತ್ರ ಅವಕಾಶ ನೀಡಿದ್ದಿರಿ ಎಂದರು. ಹೌದು ಏನಾಗುತ್ತಿದೆ?? ಇದು ಮುಜುಗರದ ಸಂಗತಿ, ಎಂದಿದ್ದಾರೆ.
ಅಲ್ಲದೇ, ಉಳಿದ ಸಂಸದರಿಗೆ ನೀವು ಯಾರ ಮುಂದೆ ಪುಂಗಿ ಉದುತ್ತಿದ್ದಿರಿ?, ಎಂದು ಪ್ರಶ್ನಿಸಿದ ಅವರ ಮಾತನ್ನು ನಿಲ್ಲಿಸಲು ಮಾಡಿದ ಪ್ರಯತ್ನಕ್ಕೆ ಮತ್ತಷ್ಟು ಕೆರಳಿದ ಜಯಾ ಅವರು ಹೇಳಿದರು, "ನೋಡಿ, ನಿಮ್ಮ ಕೆಟ್ಟ ದಿನಗಳು ಶೀಘ್ರದಲ್ಲೇ ಬರಲಿವೆ. ನಿಮ್ಮ ವರ್ತನೆ ಹೀಗೆಯೇ ಮುಂದುವರಿದರೆ ನಿಮ್ಮ ಕೆಟ್ಟ ದಿನಗಳು ಬಹುಬೇಗ ಬರುತ್ತವೆ", ಎಂದು ಶಾಪ ಹಾಕಿದ್ದಾರೆ.