ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ : ನಳಿನ್ ಕುಮಾರ್ ಕಟೀಲ್ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಬದಲಾವಣೆ ಕೇವಲ ಊಹಾಪೋಹ, ಕಪೋಲಕಲ್ಪಿತ ಕತೆ. ಬೊಮ್ಮಾಯಿ ಪೂರ್ಣಪ್ರಮಾಣದಲ್ಲಿ ಸರ್ಕಾರವನ್ನು ನಡೆಸಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಚಿವ ಸಂಪುಟ ಪುನರ್ ರಚನೆಯೂ ಇಲ್ಲ. ವಿವಿಧ ಕಾರಣಕ್ಕೆ ಖಾಲಿ ಇರುವ ಸ್ಥಾನಗಳನ್ನು ತುಂಬುವ ಕೆಲಸವನ್ನು ಮಾತ್ರ ಮಾಡುತ್ತೇವೆ ಎಂದರು.
ಬೆಳಗಾವಿ ಸೋಲಿನ ಬಗ್ಗೆ ಅವಲೋಕನ ಮಾಡಲಾಗಿದೆ. ಸಭೆ ನಡೆಸಿ ಎಲ್ಲಾ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇನ್ನೊಮ್ಮೆ ಸಭೆ ನಡೆಸಿ ಸೋಲಿನ ಕುರಿತು ಆತ್ಮಾವಲೋಕನ ಮಾಡಲಿದ್ದೇವೆ. ನಮ್ಮ ಗುರಿ ಇದ್ದಿದ್ದು ಹತ್ತು ಸ್ಥಾನ ಆದರೆ 11 ಸ್ಥಾನ ಗೆದ್ದಿದ್ದೇವೆ. ಸೋತ ಕ್ಷೇತ್ರದ ಕಡೆಯೂ ವಿಮರ್ಶೆ ಮಾಡುತ್ತೇವೆ. ಎಲ್ಲ ವರದಿ ಹೈಕಮಾಂಡ್ ಗೆ ನೀಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಗೆ ಮತಾಂತರ ಕಾಯ್ದೆ ವಿರೋಧಿಸುವ ನೈತಿಕತೆ ಇಲ್ಲ. 2016ರಲ್ಲಿ ಸಿದ್ದರಾಮಯ್ಯನವರೇ ಸಹಿ ಹಾಕಿದ್ದರು. ಕ್ಯಾಬಿನೆಟ್ಟಿಗೆ ತರಬೇಕು ಎಂದು ಅವರೇ ಆದೇಶಿಸಿದ್ದರು. ಎಂಥ ಮರೆವು ಸಿದ್ದರಾಮಯ್ಯನವರಿಗೆ! ಇದು ಕುರುಡು ಮರೆವಾ, ಜಾಣ ಮರೆವಾ? ಅಧಿಕಾರ ಇದ್ದಾಗ ಒಂದು ಇಲ್ಲದಾಗ ಒಂದು ರೀತಿಯ ವರ್ತನೆ ಎಂದರು.
ಆಮಿಷದ ಮತಾಂತರದಿಂದ ಸಮಾಜದ ಸಾಮರಸ್ಯದಲ್ಲಿ ಸಮಸ್ಯೆಗಳಾಗುತ್ತಿದ್ದವು. ಕಾಯ್ದೆ ಮೂಲಕ ಇದರ ನಿಯಂತ್ರಣ ಆಗಲಿದೆ. ಕಾಯ್ದೆ ಮೂಲಕ ಸರ್ಕಾರ ಸಾಮರಸ್ಯದ ಸಂದೇಶ ಕೊಟ್ಟಿದೆ. ಯಾರೇ ಆಗಲಿ ಆಮಿಷವೊಡ್ಡಿ ಬಲಾತ್ಕಾರವಾಗಿ ಮತಾಂತರ ಮಾಡುವ ಪ್ರಯತ್ನ ಮಾಡುವಂತಿಲ್ಲ. ಸ್ವಯಂಪ್ರೇರಿತವಾಗಿ ಬೇರೆ ಮತಕ್ಕೆ ಹೋಗುವುದಿದ್ದರೆ ಅದಕ್ಕೆ ಅವಕಾಶವಿದೆ. ಒತ್ತಡ ತಂದು ಮತಾಂತರ ಮಾಡುವುದಕ್ಕೆ ಮಾತ್ರ ಕಾಯ್ದೆಯಲ್ಲಿ ನಿರ್ಬಂಧವಿದೆ ಎಂದರು.