ಇದು ಡಿಕೆಶಿ ಸಂಸ್ಕೃತಿಯನ್ನು ತೋರಿಸುತ್ತದೆ; ಇತರರ ಆರೋಗ್ಯದ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿಲ್ಲ - ಸಿಎಂ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಮೇಕೆದಾಟು ಪಾದಯಾತ್ರೆಯಲ್ಲಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ಇಲ್ಲ ಎಂದಿದ್ದಾರೆ.
ಕೋವಿಡ್19 ಪರೀಕ್ಷೆ ನಿರಾಕರಿಸಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ, ಸಿಎಂ ಬಸವರಾಜ ಬೊಮ್ಮಾಯಿ, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ; ಇತರರ ಆರೋಗ್ಯದ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿಲ್ಲ, ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಪಾದಯಾತ್ರೆಯ ಬಳಿಕ ಕೋವಿಡ್ ಪರೀಕ್ಷೆಗೆಂದು ಬಂದ ಅಧಿಕಾರಿಗಳಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿವಕುಮಾರ್ ಅವರು, "ನಾನು ಯಾವುದೇ ಟೆಸ್ಟ್ ಕೊಡೋದಿಲ್ಲ, ನನಗೆ ಅವಶ್ಯಕತೆ ಇಲ್ಲ. 15 ಕಿಲೋಮೀಟರ್ ನಡ್ಕೊಂಡು ಬಂದಿದೇನೆ ಏನಾದ್ರು ಜಗ್ಗಿದಿನಾ?" ಎಂದು ಖಡಾಖಂಡಿತವಾಗಿ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದರು.
ಇನ್ನೂ, ಕೋವಿಡ್ ನಿಯಮಾವಳಿಯನ್ನು ದಿಕ್ಕರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡ 30 ಜನರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಕುರಿತು ಮಾತನಾಡಿದ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೋವಿಡ್ 19 ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದಕ್ಕಾಗಿ 30 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾಮನಗರ ಜಿಲ್ಲಾಡಳಿತ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ಕಾನೂನನ್ನು ಉಲ್ಲಂಘಿಸುವ ಯಾರನ್ನೂ ನಾವು ಬಿಡುವುದಿಲ್ಲ, ಎಂದು ಹೇಳಿದ್ದಾರೆ.