4 ವರ್ಷದ ಕರುಳ ಕುಡಿಯನ್ನೇ ಕೊಚ್ಚಿ ಕೊಂದ ತಾಯಿ! | ಜನತಾ ನ್ಯೂಸ್
ಮೈಸೂರು : ತನ್ನ 4 ವರ್ಷದ ಮಗನನ್ನೇ ಮಚ್ಚಿನಿಂದ ಮನಬಂದತೆ ಕೊಚ್ಚಿ ಕೊಲೆ ಮಾಡಿರುವ ಅಮಾನುಷ ಘಟನೆಯೊಂದು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೂದುನೂರು ಗ್ರಾಮದಲ್ಲಿ ನಡೆದಿದೆ.
ಬೂದುನೂರು ಗ್ರಾಮದ ಶಂಕರ್ ಯಡೆತೊರೆ ಗ್ರಾಮದ ಭವಾನಿಯನ್ನು ಮದುವೆಯಾಗಿದ್ದು ದಂಪತಿಗೆ 4 ವರ್ಷದ ಮಗ ಇದ್ದ. ಗಂಡನನ್ನ ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು.ಕಳೆದ 15 ದಿನಗಳ ಹಿಂದೆ ಪತಿಯೇ ಹೋಗಿ ಪತ್ನಿ ಮತ್ತು ಮಗನನ್ನ ಬೂದುನೂರಿಗೆ ಕರೆದುಕೊಂಡು ಬಂದಿದ್ದ.
ಕೆಲವು ದಿನಗಳು ಚೆನ್ನಾಗಿಯೇ ಇದ್ದ ಭವಾನಿ, ದೇವತೆ ಮೈಮೇಲೆ ಬಂದಿದ್ದಾಳೆ ಎಂದು ಮಗುವಿನ ಬಾಯಿಗೆ ಕುಂಕುಮ ಹಾಕಿ ತಿನ್ನುವಂತೆ ಒತ್ತಾಯಿಸುತ್ತಿದ್ದಳು. ಒಂದು ವಾರದ ಹಿಂದೆ ರಾತ್ರಿ ವೇಳೆ ಮಗುವಿನ ಕುತ್ತಿಗೆಗೆ ಟವಲ್ನಿಂದ ಬಿಗಿದು ಸಾಯಿಸಲು ಪ್ರಯತ್ನಿಸಿದ್ದಳು. ಗಂಡ ಹಾಗೂ ಇತರರು ಮಗುವನ್ನು ರಕ್ಷಿಸಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು.
ಭಾನುವಾರ ಮಧ್ಯಾಹ್ನ ಮನೆಯಲ್ಲಿ ಗಂಡ ಇಲ್ಲದ ವೇಳೆ ಪುತ್ರನ ಮೇಲೆ ಮನಸೋಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಾ ಮಗು ಚೀರಾಡುತ್ತಿತ್ತು.
ಗ್ರಾಮಸ್ಥರು ಹೆಚ್ ಡಿ ಕೋಟೆ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನ ಮೈಸೂರಿಗೆ ಕರೆದುಕೊಂಡಿದ್ದು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.