ಸುರಕ್ಷತಾ ಮಾರ್ಗಸೂಚಿ ತೆರವಾದ ಬಳಿಕ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ - ಸಿದ್ದರಾಮಯ್ಯ | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಮೂರನೇ ಅಲೆಯ ತೀವ್ರತೆ ಕಡಿಮೆಯಾಗಿ, ಸುರಕ್ಷತಾ ಮಾರ್ಗಸೂಚಿಗಳು ತೆರವಾದ ಬಳಿಕ ರಾಮನಗರದಿಂದಲೇ ಪಾದಯಾತ್ರೆಯನ್ನು ಮುಂದುವರಿಸುತ್ತೇವೆ, ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭಾ ಅಧಿವೇಶನಕ್ಕೂ ಮೊದಲೇ ಪಾದಯಾತ್ರೆ ಘೋಷಣೆ ಆಗಿತ್ತು ಆಗ ಕೊರೊನಾ 3ನೇ ಅಲೆ ಆರಂಭವಾಗಿರಲಿಲ್ಲ. ಈಗ ಸೋಂಕು ಉಲ್ಭಣಿಸುತ್ತಿದ್ದು ಬೆಂಗಳೂರು ನಗರದಲ್ಲಿಯೇ ಸುಮಾರು 15 ಸಾವಿರ ಜನರು ಸೋಂಕಿಗೀಡಾಗಿದ್ದಾರೆ. ಮುಂದಿನ ಪಾದಯಾತ್ರೆ ಬೆಂಗಳೂರು ಕಡೆ ಹೋಗಲಿರುವುದರಿಂದ ಜನರ ಆರೋಗ್ಯದ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ, ಎಂದು ಅವರು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದಂತಹ ಪಕ್ಷದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ, ಸಂಘ ಸಂಸ್ಥೆಗಳ ಸದಸ್ಯರಿಗೂ, ಚಿತ್ರ ರಂಗದ ಕಲಾವಿದರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಜನಪರ ಕಾಳಜಿಯಿಂದ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಕೊರೊನಾ ನಿಯಂತ್ರಣದ ಕೆಲಸಕ್ಕಿಂತಲೂ ಹೆಚ್ಚಿನ ಆದ್ಯತೆ ಮತ್ತು ಸಮಯವನ್ನು ರಾಜ್ಯ ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಗಟ್ಟುವ ಕುತಂತ್ರಗಳಿಗೆ ನೀಡಿದೆ. ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರ ಪಾದಯಾತ್ರೆಯ ಕಡೆ ಬೊಟ್ಟು ಮಾಡುತ್ತಿದೆ. ಪಾದಯಾತ್ರೆ ನಿಂತ ಮೇಲೆ ಯಾರ ಮೇಲೆ ಆರೋಪ ಮಾಡುತ್ತಾರೋ ನೋಡೋಣ.
ಕೋವಿಡ್ ಸುರಕ್ಷತಾ ನಿಯಮಗಳ ಘೋಷಣೆಯ ನಂತರವೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಧಾನ ಪರಿಷತ್ ನ ನೂತನ ಸದಸ್ಯರ ಪ್ರಮಾಣ ವಚನ ಸಮಾರಂಭ ನಡೆಸಿದರು. ಅದರಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರ ಸಹಿತ 4-5 ಸಾವಿರ ಜನ ಸೇರಿದ್ದರು. ಆಗ ಕೊರೊನಾ ಹರಡುವ ಆತಂಕ ಸರ್ಕಾರಕ್ಕೆ ಇರಲಿಲ್ಲವೇ?
ಶಾಸಕರಾದ ರೇಣುಕಾಚಾರ್ಯ, ಸುಭಾಷ್ ಗುತ್ತೇದಾರ್ ಸಾವಿರಾರು ಜನ ಸೇರಿಸಿ ಮೊನ್ನೆ ಪ್ರತಿಭಟನೆ, ಕಾರ್ಯಕ್ರಮ ನಡೆಸಿದ್ರು. ಗೃಹ ಸಚಿವರ ತವರೂರಲ್ಲಿ ದೊಡ್ಡ ಜಾತ್ರೆ ನಡೆಯಿತು. ನಮ್ಮ ಮೇಲೆ ತರಾತುರಿಯಲ್ಲಿ ಮೊಕದ್ದಮೆ ದಾಖಲಿಸಿದ ರಾಜ್ಯ ಸರ್ಕಾರ ತಮ್ಮ ಪಕ್ಷದ ಶಾಸಕರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ?
ಕಾಂಗ್ರೆಸ್ ಪಕ್ಷದವರ ಮೇಲೆ ಮಾತ್ರ ಸುಳ್ಳು ಕೇಸ್ ಹಾಕಿ, ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೇಗಾದರೂ ಮಾಡಿ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂಬುದು ಈ ಸರ್ಕಾರದ ಉದ್ದೇಶವಾಗಿದೆ. ಒಟ್ಟಾರೆ ಸರ್ಕಾರ ಕೊವಿಡ್ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ.
ಜನರ ಆರೋಗ್ಯದ ಕಾಳಜಿ ನಮಗೂ ಇದೆ, ನಮ್ಮ ಪಾದಯಾತ್ರೆ ಇಂದ ಕೊರೊನಾ ಸೋಂಕು ಉಲ್ಬಣವಾಯಿತು ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಬರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಕೊರೊನಾ ಉಲ್ಬಣಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸೋಣ ಎಂದು ಇಂದು ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ನಿರ್ಧರಿಸಿದ್ದೇವೆ.
ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಜನರ ಸ್ವಯಂಪ್ರೇರಣೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಪಾದಯಾತ್ರೆ ಸ್ಥಗಿತಗೊಂಡಿದ್ದಕ್ಕೆ ಯಾರೂ ಬೇಸರ ಮಾಡಿಕೊಳ್ಳಬಾರದು. ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆದ ಮೇಲೆ ಪಾದಯಾತ್ರೆ ಪುನರಾರಂಭ ಮಾಡುತ್ತೇವೆ, ಆಗಲೂ ತಾವೆಲ್ಲ ನಮ್ಮ ಜೊತೆಗಿದ್ದು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ, ಎಂದು ಸಿದ್ದರಾಮಯ್ಯ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.