ಕಾಂಗ್ರೆಸ್ ನಾಯಕರಿಗೆ ತಪ್ಪಿನ ಅರಿವಾಗಿದೆ: ಸಚಿವ ಅಶ್ವತ್ಥನಾರಾಯಣ | ಜನತಾ ನ್ಯೂಸ್
ಬೆಂಗಳೂರು : ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ ತಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ತಮ್ಮ ತಪ್ಪಿನ ಅರಿವಾಗಿ ಇಂದು ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿದ್ದಾರೆ. ನಾವು ಪಾದಯಾತ್ರೆಗೆ ಯಾವುದೇ ಅನುಮತಿ ನೀಡಿರಲಿಲ್ಲ. ಕಾಂಗ್ರೆಸ್ ನವರು ನಾವು ಪಾದಾಯಾತ್ರೆ ಮಾಡುತ್ತೇವೆಂದು ಭಂಡತನ ಮೆರೆದಿದ್ದಾರೆ. ಅದನ್ನು ಬಿಡುವುದಿಲ್ಲ ಎನ್ನುವುದನ್ನು ಸರ್ಕಾರ ತೋರಿಸಿದೆ. ಒಂದು ಹಂತಕ್ಕೆ ಬಂದಾಗ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದರು.
ಮೇಕೆದಾಟು ಕುಡಿಯುವ ನೀರು ಎಲ್ಲರಿಗೂ ಬೇಕಾಗಿದೆ. ರಾಜ್ಯದ ನೆಲ, ಜಲದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಸೇರುತ್ತೇವೆ. ಆದರೆ, ರಾಜಕೀಯ ಲಾಭಕ್ಕಾಗಿ ಮಾಡಿದ ಈ ಪಾದಯಾತ್ರೆಗೆ ಸೂಕ್ತ ಸಮಯ, ಸಂದರ್ಭ ಇದಾಗಿರಲಿಲ್ಲ. ಮೇಕೆದಾಟು ಯೋಜನೆ ಯಾರೂ ಬೇಡ ಎಂದು ಹೇಳಿರಲಿಲ್ಲ, ವಿರೋಧವನ್ನೂ ಮಾಡಿರಲಿಲ್ಲ. ನಮಗೂ ಯೋಜನೆ ಆಗುವುದು ಮುಖ್ಯ ಎಂದು ಹೇಳಿದರು.
ಇಂದು ಪಾದಯಾತ್ರೆ ಕೈ ಬಿಟ್ಟಿರುವುದು ಸಂತೋಷ. ಕಾಂಗ್ರೆಸ್ ನವರಿಗೆ ಮೇಕೆದಾಟು ಯೋಜನೆ ಬಗ್ಗೆ ಕಾಳಜಿ ಇಲ್ಲ. ನಾನು ಹೇಗೆ ನಾಯಕನಾಗಬೇಕು, ಸಿದ್ದರಾಮಯ್ಯನವರಿಗೆ ಹೇಗೆ ಟಾಂಗ್ ಕೊಡಬೇಕು ಎಂಬ ಚಿಂತನೆಯಿದೆ ಎಂದು ಟೀಕೆ ಮಾಡಿದರು.
ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಜೊತೆಗೆ, ಪಾದಯಾತ್ರೆಯಲ್ಲಿ ಭಾಗವಹಿಸಿರುವ ಜಿಲ್ಲೆಗಳಲ್ಲೂ ಕೋವಿಡ್ ಟೆಸ್ಟ್ ಮಾಡುತ್ತೇವೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹಲವಾರು ಕಾಂಗ್ರೆಸ್ ನಾಯಕರಿಗೆ ಕೋವಿಡ್ ಬಂದಿದೆ. ಅದನ್ನು ಆ ನಾಯಕರೇ ಹೇಳುತ್ತಿದ್ದಾರೆ ಎಂದರು.