ಸ್ತಬ್ಧಚಿತ್ರ ನಿರಾಕರಣೆ ವಿರುದ್ಧ ರಾಜಕೀಯ ಪಕ್ಷಗಳ ಆರೋಪ : ರಾಜ್ಯಗಳಿಗೆ ಉತ್ತರಿಸಿ ರಕ್ಷಣಾ ಮಂತ್ರಿ ಪತ್ರ | ಜನತಾ ನ್ಯೂಸ್
ನವದೆಹಲಿ : ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆಯ್ಕೆಯಾದ ಸ್ತಬ್ಧಚಿತ್ರಗಳ ಪಟ್ಟಿಯಿಂದ ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಹೊರಗಿಡಲಾಗಿದ್ದು, ಕೇಂದ್ರದ ಈ ನಿರ್ಧಾರಕ್ಕೆ ದುರುದ್ದೇಶ ಹಾಗೂ ರಾಜಕೀಯ ದ್ವೇಷ ಕಾರಣ ಎಂಬಂತೆ ಬಿಂಬಿಸಿ ಪ್ರತಿಪಕ್ಷಗಳ ಮುಖಂಡರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕೇಂದ್ರದ ನಿರ್ಧಾರಕ್ಕೆ ಸಾಕಷ್ಟು ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅಸಮಧಾನ ವ್ಯಕ್ತಪಡಿಸಿ ಪ.ಬಂ. ಸಿಎಂ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ ಕೇರಳ ಸಿಎಂ ಪಿನರಾಯಿ ವಿಜಯನ್ ಪತ್ರ ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ.
ಇಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಉತ್ತರ ನೀಡಿ ಪತ್ರ ಬರೆದಿದ್ದಾರೆ.
ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆಯ್ಕೆಯಾದ 12 ಸ್ತಬ್ಧಚಿತ್ರಗಳ(ಟ್ಯಾಬ್ಲಾಕ್ಸ್) ಅಂತಿಮ ಪಟ್ಟಿಗೆ ತಮಿಳುನಾಡಿನ ಸ್ತಬ್ಧಚಿತ್ರ ಪ್ರವೇಶಿಸಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪತ್ರದಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ತಿಳಿಸಿದ್ದಾರೆ.
ಅಲ್ಲದೇ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಿಯಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ, 2017, 2019, 2020, ಮತ್ತು 2021 ರ ಅವಧಿಯಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ತಮಿಳುನಾಡು ರಾಜ್ಯ ಸರ್ಕಾರದಿಂದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಷ್ಟು ಸೇರಿಸಿ ಸಿಎಂ ಗಮನಕ್ಕೆ ಮಾಹಿತಿಯನ್ನು ತಂದಿದ್ದಾರೆ.
ಗಣರಾಜ್ಯೋತ್ಸವದ ಪರೇಡ್ನಿಂದ ತಮಿಳುನಾಡಿನ ಸ್ತಬ್ಧಚಿತ್ರವನ್ನು ಹೊರಗಿಟ್ಟಿರುವ ಕುರಿತು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪತ್ರ ಬರೆದಿದ್ದರು. ಸ್ತಬ್ಧಚಿತ್ರವನ್ನು ಸೇರಿಸಲು ಪ್ರಧಾನ ಮಂತ್ರಿಯ ಮಧ್ಯಸ್ಥಿಕೆಯನ್ನು ಕೋರಿ ಬರೆದಿರುವ ಪತ್ರದಲ್ಲಿ ಸಿಎಂ ಸ್ಟಾಲಿನ್ ಅವರು ತಮ್ಮ ಸ್ತಬ್ಧಚಿತ್ರವು ಸುಬ್ರಮಣ್ಯ ಭಾರತಿ, VO ಚಿದಂಬರನಾರ್, ವೇಲು ನಾಚಿಯಾರ್, ಮರುತು ಪಾಂಡಿಯಾರ್ ಸಹೋದರರು ಮತ್ತು ಇತರರನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದ್ದರು.
ಇಷ್ಟೇ ಅಲ್ಲದೇ, ಗಣರಾಜ್ಯೋತ್ಸವಕ್ಕೆ ಪಶ್ಚಿಮ ಬಂಗಾಳ ರಾಜ್ಯದ ಸ್ತಬ್ಧಚಿತ್ರದ ಹೊರತುಪಡಿಸಿರುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಬರೆದ ಪತ್ರವೊಂದರಲ್ಲಿ, ರಕ್ಷಣಾ ಸಚಿವರು, "2016, 2017, 2019, ಮತ್ತು 2021 ರ ಅವಧಿಯಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ" ಎಂದು ಜ್ಞಾಪಿಸಿದ್ದಾರೆ.