ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಮುಸಲ್ಮಾನ್ ಗೂಂಡಾಗಳು ಕೊಂದರು - ಸಚಿವ ಈಶ್ವರಪ್ಪ | ಜನತಾ ನ್ಯೂಸ್
ಬೆಂಗಳೂರು : ಭಜರಂಗದಳದ ಕಾರ್ಯಕರ್ತನ ಹತ್ಯೆಯಿಂದ ನನಗೆ ತುಂಬಾ ಬೇಸರವಾಗಿದೆ. ಅವರನ್ನು "ಮುಸಲ್ಮಾನ್ ಗೂಂಡಾಗಳು" (ಮುಸ್ಲಿಂ ಗೂಂಡಾಗಳು) ಕೊಂದರು. ಪರಿಸ್ಥಿತಿಯನ್ನು ವಿಶ್ಲೇಷಿಸಲು ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ. ನಾವು ಗೂಂಡಾವಾದಕ್ಕೆ ಅವಕಾಶ ನೀಡುವುದಿಲ್ಲ, ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ ಎಏನ್ಐ ವರದಿ ಮಾಡಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ(26) ಎಂಬಾತನನ್ನು ಕೊಲೆ ಮಾಡಲಾಗಿದೆ. ನಿನ್ನೆ ಹರ್ಷ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ನಿನ್ನೆ ರಾತ್ರಿ ಆರಂಭವಾದ ತನಿಖೆಯಲ್ಲಿ ಘಟನೆಯ ಕುರಿತು ಕೆಲವು ಸುಳಿವುಗಳು ಸಿಕ್ಕಿವೆ, ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಕುರಿತು ಮಾತನಾಡಿ, "4-5 ಯುವಕರ ತಂಡ ಆತನನ್ನು ಹತ್ಯೆ ಮಾಡಿದೆ. ಈ ಹತ್ಯೆಯ ಹಿಂದೆ ಯಾವುದೇ ಸಂಘಟನೆಯ ಕೈವಾಡವಿದೆ ಎಂದು ನನಗೆ ಗೊತ್ತಿಲ್ಲ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ನಗರ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ" ಎಂದು ಹೇಳಿದ್ದಾರೆ.
ಸಧ್ಯಕ್ಕೆ ಒಟ್ಟಾರೆ ಪರಿಸ್ಥಿತಿ ಶಾಂತಿಯುತವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರು, ಆರ್ಎಎಫ್ಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಸೆಕ್ಷನ್ 144 ಘೋಷಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.