ನಾಪತ್ತೆಯಾದ ಪತ್ನಿ ಫೋಟೋಗೆ ಫೇಸ್ಬುಕ್ನಲ್ಲಿ RIP ಎಂದ ಗಂಡ: ಪೋಷಕರಲ್ಲಿ ಆತಂಕ | ಜನತಾ ನ್ಯೂಸ್
ದೊಡ್ಡಬಳ್ಳಾಪುರ : ಗಂಡ ತನ್ನ ಫೇಸ್ಬುಕ್ ಅಕೌಂಟ್ನಲ್ಲಿ ಹೆಂಡತಿಯ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಇದೀಗ ಹೆಂಡತಿ ನಾಪತ್ತೆಯಾಗಿದ್ದಾಳೆ.
ಇದನ್ನು ನೋಡಿದ ಯುವತಿಯ ಪೋಷಕರು ಮಗಳನ್ನು ಹುಡುಕಿಕೊಂಡು ಗಂಡನ ಮನೆಗೆ ಬಂದಿದ್ದಾರೆ ಆಗ ನಾಪತ್ತೆಯಾಗಿರೋದು ಗೊತ್ತಾಗಿದೆ, ಪೋಷಕರಲ್ಲಿ ಆತಂಕ ಉಂಟುಮಾಡಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, 22 ವರ್ಷದ ಲೀಲಾವತಿ ನಾಪತ್ತೆಯಾದ ಗೃಹಿಣಿಯಾಗಿದ್ದಾರೆ. ಲೀಲಾವತಿ ಅವರನ್ನು ಊದನಹಳ್ಳಿ ಗ್ರಾಮದ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಜೊತೆ ಮದುವೆ ಮಾಡಿಕೊಡಲಾಗಿತ್ತು.
ಫೆಬ್ರವರಿ 23ರ ರಾತ್ರಿ ಮುನಿಕೃಷ್ಣ ತನ್ನ ತಂಗಿ ಮಗನ ಬರ್ತ್ಡೇ ಪಾರ್ಟಿಗೆ ಹೋಗಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೀಲಾವತಿ ತನ್ನ ಗಂಡನ ಜೊತೆ ಜಗಳ ಮಾಡಿದ್ದಾಳೆ. ಈ ವೇಳೆ ಮುನಿಕೃಷ್ಣ ಹೆಂಡತಿಗೆ ಹೊಡೆದಿದ್ದ ಎನ್ನಲಾಗಿದ್ದು, ಮರುದಿನ ಮಧ್ಯಾಹ್ನ ಒಂದು ಗಂಟೆಗೆ ತನ್ನ ಫೇಸ್ಬುಕ್ ಅಕೌಂಟ್ನಲ್ಲಿ ಹೆಂಡತಿಯ ಫೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
ಈ ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ತಂದೆ ಉದನಹಳ್ಳಿಗೆ ಬಂದು ಮಗಳನ್ನು ಹುಡುಕಾಡಿದ್ದಾರೆ. ಆದರೆ ಮಗಳು ಪತ್ತೆಯಾಗದ ಕಾರಣ ತನ್ನ ಮಗಳನ್ನು ಹೊಡೆದು ಸಾಯಿಸಿದ್ದಾನೆಂದು ನೆನೆದು ಕಣ್ಣೀರು ಹಾಕಿದ್ದಾರೆ. ಮುನಿಕೃಷ್ಣನೇ ಹೊಡೆದು ಸಾಯಿಸಿದ್ದಾನೆಂದು ಎಂದು ಆರೋಪಿಸಿದ್ದಾರೆ.
ಈ ಕುರಿತು ಮುನಿಕೃಷ್ಣನ ತಮ್ಮ ಮುನಿರಾಜುನನ್ನು ಕೇಳಿದ್ರೆ ಆತ ಬೇರೆಯೇ ಕಥೆ ಹೇಳುತ್ತಿದ್ದಾನೆ. ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಅಣ್ಣ-ಅತ್ತಿಗೆ ನಡುವೆ ಜಗಳವಾಗಿದ್ದು ನಿಜ. ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದ. ಅನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು, ಅತ್ತಿಗೆಯೇ ಅಣ್ಣನ ಫೇಸ್ಬುಕ್ ಅಕೌಂಟ್ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ ಎನ್ನುತ್ತಿದ್ದಾನೆ.