ಕಾಂಗ್ರೆಸ್ ಪಕ್ಷ ದೊಂಬರಾಟ ಮಾಡುತ್ತಿದೆ, ನೀರಿಗೂ ಕಾಂಗ್ರೆಸ್ ರಾಜಕೀಯ ಲೇಪ ಹಚ್ಚುತ್ತಿದೆ! | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ಪಕ್ಷ ದೊಂಬರಾಟ ಮಾಡುತ್ತಿದೆ. ನೀರಿಗೂ ಕಾಂಗ್ರೆಸ್ ರಾಜಕೀಯ ಲೇಪ ಹಚ್ಚುತ್ತಿದೆ, ಕುಡಿಯುವ ನೀರಿಗೂ ರಾಜಕೀಯ ಬಣ್ಣ ಹಚ್ಚುತ್ತಿದೆ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಾಡಿನ ನೆಲ, ಜಲ, ಭಾಷೆ ಬಂದಾಗ ಎಲ್ಲರೂ ಒಂದಾಗುತ್ತಾರೆ. ಆದರೆ ಕಾಂಗ್ರೆಸ್ ಸುಮ್ಮನೆ ರಾಜಕೀಯ ಮಾಡ್ತಿದೆ. 75 ವರ್ಷಗಳಲ್ಲಿ ಕಾಂಗ್ರೆಸ್ ಮೇಕೆದಾಟಿಗೆ ಏನೂ ಮಾಡಿಲ್ಲ. ಡಿಪಿಆರ್ ಕೂಡಾ ಅವರು ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ನಾನು ಖಂಡಿಸುತ್ತೇನೆ. ಮೇಕೆದಾಟು ಅನುಷ್ಠಾನ ಮಾಡಲು ನಮ್ಮ ರಾಜ್ಯ ಮತ್ತು ಕೇಂದ್ರ ಬದ್ದವಾಗಿದೆ ಎಂದರು.
ಮೇಕೆದಾಟು ಯೋಜನೆಯನ್ನು ಬಿಜೆಪಿ ಸರಕಾರ ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಇದನ್ನು ಕಂಡು ಶಿವಕುಮಾರ್ ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಿದೆ. ಅವರ ಪಾದಯಾತ್ರೆ ಕೇವಲ ವಾಕಿಂಗ್ ಆಗಬಹುದೇ ಹೊರತು ಜನರಾರೂ ಅವರೊಂದಿಗೆ ಹೋಗುತ್ತಿಲ್ಲ. ಕಾಣಿಸಿಕೊಳ್ಳುತ್ತಿರುವವರು ಕೇವಲ ಭಟ್ಟಂಗಿಗಳಷ್ಟೆ ಎಂದು ಅವರು ಹರಿಹಾಯ್ದರು.
ಪಾದಯಾತ್ರೆ ಮಲ್ಲೇಶ್ವರಂಗೆ ಬರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಿಗೆ ಬೇಕಾದರೂ ಪಾದಯಾತ್ರೆ ಬರಲಿ. ನಮ್ಮ ಕ್ಷೇತ್ರಕ್ಕೆ ಬರೋದಕ್ಕೆ ಯಾವುದೇ ಅಭ್ಯಂತರ ಇಲ್ಲ. ನೀವು ನಮ್ಮ ಕ್ಷೇತ್ರದಕ್ಕೆ ಬಂದ್ರೆ ನಮಗೆ ಜನ ಆಶೀರ್ವಾದ. ಪಾದಯಾತ್ರೆ ಬರಲಿ ನಮಗೇನೂ ಅಭ್ಯಂತರ ಇಲ್ಲ ಎಂದರು.
ಪರಿಜ್ಞಾನ ಇಲ್ಲದೆ ಈ ಪಾದಯಾತ್ರೆ ಮಾಡ್ತಿದ್ದಾರೆ. ನಾಟಕ ಮಾಡಿಕೊಂಡು ಪಾದಯಾತ್ರೆ ಮಾಡ್ತಿದ್ದಾರೆ. ವ್ಯಾಪಾರ, ಲಾಭ, ನಷ್ಟ ನೋಡೋದು ಡಿಕೆಶಿವಕುಮಾರ್ ಗುಣ. ತಾನು ಹೇಗೆ ಸಿಎಂ ಆಗಬೇಕು ಅಂತ ಡಿಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಟಕ್ಕರ್ ಹೊಡೆಯಲು ಈ ಪಾದಯಾತ್ರೆ ಮಾಡುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.
ತಮಿಳುನಾಡಿನಲ್ಲಿ ಅವರದ್ದೇ ಸರ್ಕಾರ ಇದೆ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದು ಇದನ್ನು ಮಾಡಲು ಸಾಧ್ಯವೇ ಇಲ್ಲ. ಇವರ ಜನ್ಮದಲ್ಲಿ ಮೇಕೆದಾಟು ಕಾಂಗ್ರೆಸ್ ಜಾರಿ ಮಾಡಲ್ಲ. ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ರಾಮನಗರ ಅಭಿವೃದ್ಧಿ ಮಾಡಿಲ್ಲ. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಏನೂ ಕೆಲಸ ಮಾಡಿಲ್ಲ. ರಾಜಕೀಯ ಜನ್ಮ ಪಡೆದು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.