ಆಳಂದ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ: ದರ್ಗಾ ಬಳಿ ಗಲಾಟೆ, ಕಲ್ಲುತೂರಾಟ | ಜನತಾ ನ್ಯೂಸ್
ಕಲಬುರಗಿ : ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಲು ಹೋಗಿದ್ದಾಗ ಈ ಗಲಾಟೆ ನಡೆದಿದೆ.
ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ಕಲ್ಲು ತೂರಾಟದ ನಡುವೆಯೇ ದರ್ಗಾದೊಳಗೆ ಹೋಗಿ ಪೂಜೆ ಮಾಡಿ ಬಂದಿದೆ.
ಆಳಂದ ತಾಲೂಕು ಮತ್ತು ಕಲಬುರಗಿ ನಗರದ ಅನೇಕ ಕಡೆ ನಿಷೇದಾಜ್ಞೆ ಕೂಡಾ ವಿಧಿಸಲಾಗಿತ್ತು. ಇನ್ನು ಹತ್ತು ಜನರಿಗೆ ಲಿಂಗಕ್ಕೆ ಪೂಜೆಗೆ ಅವಕಾಶವನ್ನು ಜಿಲ್ಲಾಳಿತ ನೀಡಿತ್ತು. ಅದರಂತೆ ಇಂದು ಕೇಂದ್ರ ಸಚಿವ ಭಗವಂತ ಕೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಹತ್ತು ಜನರಿಗೆ ಅವಕಾಶ ನೀಡಲಾಗಿತ್ತು.
ಸಾಮಾನ್ಯವಾಗಿ ಕೆಲವರು ಈ ಲಿಂಗಕ್ಕೆ ಹೋಗಿ ಪ್ರತಿದಿನ ನಮಸ್ಕಾರ ಮಾಡುವುದು, ಪೂಜೆ ಮಾಡುವುದನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಆದ್ರೆ ಕೆಲ ತಿಂಗಳ ಹಿಂದೆ ದರ್ಗಾದಲ್ಲಿರುವ ಲಿಂಗವನ್ನು ಮತ್ತೊಂದು ಕೋಮಿನ ಜನರು ಮಲಮೂತ್ರ ಮಾಡಿ, ಲಿಂಗಕ್ಕೆ ಅಪಮಾನ ಮಾಡಿದ್ದರಂತೆ.
ಹೀಗಾಗಿ ಶಿವರಾತ್ರಿ ಅಂಗವಾಗಿ ಇಂದು ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗವನ್ನು ಗಂಗಾ ಜಲದಿಂದ ಶುದ್ಧೀಕರಿಸಿ, ಲಿಂಗಕ್ಕೆ ಪೂಜೆ ಮಾಡುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದರು. ಅದರಂತೆ ಐದು ದಿನದ ಹಿಂದೆ ಶಿವಮಾಲೆಯನ್ನು ಕೂಡಾ ಧರಿಸಿದ್ದರು. ಶಿವಮಾಲೆ ಧರಿಸಿದ್ದ ನೂರಾರು ಹಿಂದೂಪರ ಕಾರ್ಯಕರ್ತರು, ಇಂದು ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಿ, ವೃತವನ್ನು ಸಂಪನ್ನ ಮಾಡುವುದಾಗಿ ಹೇಳಿದ್ದರು.
ಗಲಾಟೆ ಪರಿಣಾಮ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನು ದರ್ಗಾ ಮುಂದೆ ನೂರಾರು ಜನರು ಸೇರಿದ್ದು ಪೊಲೀಸರು ಸೇರಿದಂತೆ ಅನೇಕರ ಮೇಲೆ ಕಲ್ಲು ತೂರಾಟ ನಡೆದಿದೆ.