ಕಾಸ್ಮೊಲಜಿ ಶಿಕ್ಷಣ, ಸಂಶೋಧನಾ ತರಬೇತಿ ಕೇಂದ್ರಕ್ಕೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ | ಜನತಾ ನ್ಯೂಸ್
ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ನೀವೆಲ್ಲರೂ ಒಟ್ಟುಗೂಡಿದ್ದೀರಿ. ಇದು ಕೇವಲ ತಾರಾಲಯವಲ್ಲ, ನೀವು ಬಳಸಬಹುದಾದ ಎಲ್ಲಾ ಡೇಟಾವನ್ನು ಇದು ನಿಮಗೆ ನೀಡಲಿದೆ ಎಂದರು.
ಕರ್ನಾಟಕದ ರಾಜ್ಯಸಭಾ ಸದಸ್ಯೆ ಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಸ್ಥಳೀಯ ಪ್ರದೇಶ ಅಭಿವೃದ್ಧಿ (ಎಂಪಿಎಲ್ಎಡಿ) ನಿಧಿಯಿಂದ ಅಂದಾಜು 81 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಯೋಜನೆಯು ಮಾರ್ಚ್ 2023 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.
ಭಾರತ ವಿಶ್ವಗುರುವಾಗಲು ಇದೊಂದು ಮಹತ್ವದ ಹೆಜ್ಜೆ. ಮೈಸೂರು ವಿಶ್ವವಿದ್ಯಾಲಯ 3 ಎಕರೆ ಜಾಗ ನೀಡಿದ್ದು, ಈ ಕೇಂದ್ರದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ಪ್ಲಾನಿಟೋರಿಯಂನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸ್ಥಾಪಿಸಲಿದೆ. ಯುವ ವಿಜ್ಞಾನಿಗಳು ಹೆಚ್ಚಾಗಿ ಬರಬೇಕಿದೆ. ಅದರಲ್ಲಿ ಯುವತಿಯರ ಸಂಖ್ಯೆಯೂ ಗಣನೀಯವಾಗಿರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.