ನಾಲ್ವರು ಸಹೋದ್ಯೋಗಿಗಳನ್ನು ಶೂಟ್ ಮಾಡಿ ಪ್ರಾಣ ತೆಗೆದು ತಾನೂ ಹತನಾದ ಬೆಳಗಾವಿಯ BSF ಯೋಧ | ಜನತಾ ನ್ಯೂಸ್
ಚಿಕ್ಕೋಡಿ : ಪಂಜಾಬ್ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕನೋರ್ವ ತನ್ನ ಕರ್ತವ್ಯದ ಗನ್ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡು ಹತನಾದ ದುರ್ಘಟನೆ ಪಂಜಾಬ್ನಲ್ಲಿ ನಡೆದಿದೆ.
ಸತ್ಯಪ್ಪ ಸಿದ್ದಪ್ಪ ಕಿಲಾರಗಿ (33) ಗುಂಡಿನ ದಾಳಿ ನಡೆಸಿ ತಾನೂ ಹತನಾಗಿರುವ BSF ಯೋಧ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಸತ್ಯಪ್ಪ ಕಳೆದ 13 ವರ್ಷಗಳ ಹಿಂದೆ BSF ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಈತ ಮಾನಸಿಕವಾಗಿ ಖಿನ್ನತೆ ಒಳಗಾಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನನಾಗಿದ್ದ. ಆದ್ದರಿಂದ ಈ ರೀತಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.
6 ತಿಂಗಳ ಹಿಂದೆಯಷ್ಟೇ 1 ತಿಂಗಳ ರಜೆ ಮೇಲೆ ಬಂದಿದ್ದ ಯೋಧ, ಬ್ಯಾಂಕ್ ಒಂದರಲ್ಲಿ 10 ಲಕ್ಷ ಸಾಲ ಮಾಡಿ ತಿರಿಸಲಾಗದೆ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ. ಮಾನಸಿಕ ಅಸ್ವಸ್ಥತೆ ಕಾರಣ ರಜೆ ಮುಗಿದರೂ ಮರಳಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮನೆಯವರು ಬೆಳಗಾವಿಯಲ್ಲಿ ಕೆಲದಿನ ಬಳಿಕ ಧಾರವಾಡ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಶೂಟ್ ಮಾಡಿದ ಯೋಧ ಸೇರಿದಂತೆ ಉಳಿದ ನಾಲ್ವರೂ ಮೃತಪಟ್ಟರೆ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಬಿಎಸ್ಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರು ಬಿಹಾರದ ಹೆಡ್ ಕಾನ್ಸ್ಟೆಬಲ್ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮು ಮತ್ತು ಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್ನ ಬಲ್ಜಿಂದರ್ ಕುಮಾರ್.
ಮೃತ ಸತ್ಯಪ್ಪ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾದಿದ್ದಾರೆ. ಅತ್ತ ಜೀವ ಕಳೆದುಕೊಂಡಿರುವ ಉಳಿದ ನಾಲ್ವರು ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.