ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನಕ್ಕಾಗಿ ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಮುಖಂಡರ ಒತ್ತಡ! | JANATA NEWS
ಬೆಂಗಳೂರು : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನಕ್ಕಾಗಿ ಥಿಯೇಟರ್ಗಳಿಂದ ಬಲವಂತವಾಗಿ ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ತೆಗೆಸಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ನಿನ್ನೆ ರಾತ್ರಿ ಜೇಮ್ಸ್ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿ, ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ಜೇಮ್ಸ್ ಚಿತ್ರ ನಡೆಯುತ್ತಿರುವ ಥಿಯೇಟರ್ನಲ್ಲಿ ಶೋ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಒತ್ತಡ ತರುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
ನಿರ್ಮಾಪಕರು ಮೊದಲೇ ಥಿಯೇಟರ್ಗಳಿಗೆ ಅಡ್ವಾನ್ಸ್ ಕೊಟ್ಟಿರುತ್ತಾರೆ, ಬಿಜೆಪಿಯವರು ಬಲಾತ್ಕಾರದಿಂದ ಜೇಮ್ಸ್ ಚಿತ್ರ ತೆಗೆಸುವ ದೌರ್ಜನ್ಯ ಮಾಡುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಿನಿಮಾ ನೋಡಲು ಆಸಕ್ತಿಯಿಂದ ಇದ್ದಾರೆ. ಅಂತಹ ಸಂದರ್ಭದಲ್ಲಿ ಬಲಾತ್ಕಾರದಿಂದ ಸಿನಿಮಾ ತೆಗೆಸುವುದು, ಮಲ್ಟಿಫ್ಲೆಕ್ಸ್ಗಳಲ್ಲಿ ಪ್ರದರ್ಶನ ಪರದೆಗಳನ್ನು ಕಡಿತಗೊಳಿಸುವುದು ಸರಿಯಲ್ಲ ಎಂದರು.
ನಾನು ಬಿಜೆಪಿ ಶಾಸಕರಿಗೂ ಹೇಳುತ್ತೇನೆ. ಬಿಜೆಪಿಯವರು ಸಜ್ಜನರ ಥರ ಆಡ್ತಾರೆ. ನಾವು ಯಾರನ್ನೂ ಸಿನಿಮಾ ನೋಡಬೇಡ ಅನ್ನೋದಿಲ್ಲ. ಯಾರಿಗೆ ಇಷ್ಟ ಇದೆಯೋ ನೋಡಲಿ. ಆದರೆ ದೌರ್ಜನ್ಯ ಮಾಡಬಾರದು ಎಂದರು.
ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಕನ್ನಡದ ಜೇಮ್ಸ್ ಚಿತ್ರಕ್ಕೂ ತೆರಿಗೆ ವಿನಾಯತಿ ನೀಡಬೇಕು ಎಂದು ಆಗ್ರಹಿಸಿದರು.