ಸಿಮೆಂಟ್ ಲಾರಿಗಳ ಡಿಕ್ಕಿ, ಹೊತ್ತಿ ಉರಿದ 2 ಲಾರಿಗಳು: ಚಾಲಕ ಸಜೀವ ದಹನ | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಎರಡು ಸಿಮೆಂಟ್ ಲಾರಿಗಳು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಹೊತ್ತಿ ಉರಿದಿವೆ. ಹೊತ್ತಿಕೊಂಡ ಬೆಂಕಿಯಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.
ಬೆಂಗಳೂರಿನ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಸಂಭವಿಸಿದ್ದು, ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಲಾರಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಗಳು ಹೊತ್ತಿ ಉರಿದಿವೆ.
ಎರಡೂ ಲಾರಿಗಳು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆ ಹೊರಡುತ್ತಿದ್ದವು. ಈ ಸಮಯದಲ್ಲಿ ಎರಡೂ ಲಾರಿ ಚಾಲಕರ ನಡುವೆ ರೇಸ್ ಏರ್ಪಟ್ಟಿದೆ. ಓವರ್ ಟೇಕ್ ಮಾಡಲು ಹೋದ ವೇಳೆ ಎರಡೂ ಲಾರಿಗಳು ಪರಸ್ಪರ ಡಿಕ್ಕಿಯಾಗಿವೆ. ಲಾರಿಗಳು ವೇಗ ಹೆಚ್ಚಾಗಿದ್ದರಿಂದ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಬಂದು ಪಲ್ಟಿಯಾಗಿವೆ.
ಅಪಘಾತದ ರಭಸಕ್ಕೆ ಎರಡೂ ಲಾರಿಗಳು ನಜ್ಜುಗುಜ್ಜಾಗಿವೆ. ಕ್ಷಣಾರ್ಧದಲ್ಲಿಯೇ ಲಾರಿಗಳಿಗೆ ಬೆಂಕಿ ಹತ್ತಿಕೊಂಡಿದೆ. ಓರ್ವ ಚಾಲಕ ಹೊರ ಬರಲಾಗದೇ ಅಲ್ಲೇ ಸಜೀವ ದಹನವಾಗಿದ್ದಾನೆ. ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಗಾಯಾಳು ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಕಿ ನಂದಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಯತ್ನಿಸಿ ಬೆಂಕಿ ನಂದಿಸಿದ್ದಾರೆ.