ಮುಂದಿನ ಚುನಾವಣೆಯೇ ಕೊನೆ; ನಿವೃತ್ತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ | JANATA NEWS
ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಮಾತನಾಡಿದ್ದಾರೆ.
ಹುಟ್ಟೂರು ಸಿದ್ದರಾಮನ ಹುಂಡಿಗೆ ಸಿದ್ದರಾಮಯ್ಯ ಗುರುವಾರ ಭೇಟಿ ನೀಡಿದ್ದರು. ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಶ್ರೀ ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು.
ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಇಷ್ಟು ಕ್ಷೇತ್ರದ ಜನ ಕೇಳುತ್ತಿದ್ದಾರೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ತೀರ್ಮಾನ ಮಾಡಿಲ್ಲ. ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ಕಿತೋ ಅಲ್ಲಿಯೇ ಸೋಲಿಸಿದರು. ಹಾಗಂತ ಬೇಸರ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.
ಬರೋಬ್ಬರಿ ಐದು ಬಾರಿ ಚಾಮುಂಡೇಶ್ವರಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿಯನ್ನು ನಾನು ಯಾವಾಗಲೂ ಮರೆಯಲ್ಲ. ಮುಂದಿನ ಚುನಾವಣೆಯೇ ಕೊನೆ. ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಹೀಗಾಗಿ ಹಲವು ಕ್ಷೇತ್ರಗಳ ಜನ ಸ್ಪರ್ಧೆಗೆ ಆಹ್ವಾನಿಸಿದ್ದಾರೆ.
ಎಲ್ಲ ಕ್ಷೇತ್ರಗಳೂ ಪ್ರಯಾರಿಟಿ, ಹೆಚ್ಚು- ಕಮ್ಮಿ ಅಂತ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.