ಹಿಜಾಬ್ ಮತ್ತು ಸಾಧು ಸಂತರ ವಸ್ತ್ರದ ಹೋಲಿಕೆ ಅಕ್ಷಮ್ಯ ಅಪರಾಧ! | JANATA NEWS
ಶಿವಮೊಗ್ಗ : ಹಿಜಬ್ ವಿಷಯದಲ್ಲಿ ಅಕ್ಷಮ್ಯ ಅಪರಾಧದ ಹೇಳಿಕೆ ನೀಡಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಕ್ಷಮೆ ಕೇಳಿ ಎನ್ನುವುದಿಲ್ಲ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಅಂತ ಆಗ್ರಹಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನನಗೆ ಗೊತ್ತು ಅವರು ಬಹಳ ಭಂಡರು. ಯಾವ ಕಾರಣಕ್ಕೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಒಪ್ಪುತ್ತಾರಾ ಎನ್ನುವುದನ್ನು ತಿಳಿಸಬೇಕು. ಸಿದ್ದರಾಮಯ್ಯ ಅವರು ಹೇಳಿದ್ದು ಸರಿ ಎನ್ನುವುದಾದರೆ ಹೇಳಲಿ. ಸಿದ್ದರಾಮಯ್ಯ ಹೇಳಿದ್ದು, ಸರಿನಾ ಮೊದಲು ಹೇಳಿ? ತಪ್ಪಾದರೇ ಪಕ್ಷದಿಂದ ವಜಾ ಮಾಡಿ. ಹಾಗೆ ಸಮಸ್ಯೆಯಿದ್ದರೆ ಸಿದ್ದರಾಮಯ್ಯ ಬಗ್ಗೆ ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿ ಎಂದರು.
ಸಿದ್ದರಾಮಯ್ಯನವರದು ಹಿಂದೂ ವಿರೋಧಿ ನಡವಳಿಕೆ. ಎಲ್ಲಿಯವರೆಗೆ ನೀವು ಮುಸ್ಲಿಂರನ್ನು ಸಂತೈಸಿಕೊಂಡೇ ಹೋಗುತ್ತೀರಿ. ಬೇರೆ ಕಡೆ ಎಲ್ಲರೂ ಅಣ್ಣ- ತಮ್ಮಂದಿರಂತೆ ಒಟ್ಟಾಗಿ ಹೋಗಬೇಕು ಎನ್ನುತ್ತಿರಾ? ಕೋರ್ಟ್ ಆದೇಶವಿದ್ದರೂ ಶಿಕ್ಷಣ ಬಿಡುತ್ತೇವೆ, ಧರ್ಮ ಬಿಡಲ್ಲ ಎಂದು ಮಾತನಾಡುತ್ತಾರೆ. ತೀರ್ಪಿನ ನಂತರವೂ ಪ್ರತಿಭಟನೆ ಮಾಡುತ್ತಾರೆ. ಬಂದ್ ಮಾಡ್ತಾರೆ. ನ್ಯಾಯಾಧೀಶರಿಗೆ ಬೆದರಿಕೆ ಹಾಕುತ್ತಾರೆ. ಅಂತವರ ಪರ ನಿಲ್ಲುವ ನೀಚ ರಾಜಕಾರಣವನ್ನು ರಾಜ್ಯದ ಜನರು ಸಹಿಸಲ್ಲ ಎಂದು ಈಶ್ವರಪ್ಪ ಹೇಳಿದರು.