ತಾಯಿ ಚೆನ್ನಮ್ಮಗೆ ಐಟಿ ನೋಟಿಸ್, ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದ ಹೆಚ್.ಡಿ.ಕುಮಾರಸ್ವಾಮಿ | JANATA NEWS
ಬೆಂಗಳೂರು : ತಮ್ಮ ತಾಯಿ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು ಅದರಲ್ಲಿ ತಲೆಕಡೆಸಿಕೊಳ್ಳುವ ವಿಚಾರ ಏನಿದೆ? ನೋಟಿಸ್ ನೀಡಿರುವ ಬಗ್ಗೆ ನನಗೆ ಐಡಿಯಾ ಇಲ್ಲ. ಕೊಟ್ಟಿದ್ದರೂ ಸಹ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ ಎಂದರು.
ನಮ್ಮ ಕುಟುಂಬದ ನಮ್ಮ ವ್ಯವಹಾರ ತೆರದ ಪುಸ್ತಕವಾಗಿದೆ. ದೇವೇಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಮಹತ್ವ ಕೊಟ್ಟಿಲ್ಲ. ನಾವು ಸಹ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ ಎಂದರು.
ಐಟಿ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ಏನ್ ಉತ್ತರ ಕೊಡಬೇಕೋ ಕೊಟ್ಟರಾಯ್ತು. ನನ್ನ ಸಹೋದರನಿಗೂ ಅದನ್ನೇ ಹೇಳಿದ್ದೇನೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು ಎಂದು ಎಚ್ಡಿಕೆ ಹೇಳಿದರು.
ಇದನ್ನ ರಾಜಕೀಯವಾಗಿ ಪ್ರಚಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಾವು ಪರಿಶುದ್ಧವಾಗಿದ್ದಾಗ ಯಾರೂ ಏನು ಮಾಡೋದಕ್ಕೆ ಆಗೋದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.