ಬೆಂಗಳೂರಿನಲ್ಲಿ ಭಾರೀ ಮಳೆ: ವಿದ್ಯುತ್ ತಂತಿ ತಗುಲಿ ಯುವಕ ಸಾವು | JANATA NEWS
ಬೆಂಗಳೂರು : ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದೆ. ಭಾರೀ ಮಳೆ ಪರಿಣಾಮ ವಿದ್ಯುತ್ ಕಂಬದ ತಂತಿ ತಗಲಿ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಾಳಿ ಮತ್ತು ಮಳೆಯ ಪರಿಣಾಮ ಮರದ ಕೊಂಬೆ ತಾಗಿ ವೈರ್ ಕಟ್ ಆಗಿದ್ದು, ಕಂಬದಿಂದ ಕೆಳಕ್ಕೆ ಬಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿರುವ ದುರ್ಘಟನೆ ದೀಪಾಂಜಲಿ ನಗರದಲ್ಲಿ ಸಂಭವಿಸಿದೆ.
ಮೃತ ದುರ್ದೈವಿ ವ್ಯಕ್ತಿಯನ್ನು ಮಂಗಮ್ಮನಪಾಳ್ಯದ ನಿವಾಸಿಯಾಗಿರೋ ವಸಂತ್ ಎಂದು ಗುರುತಿಸಲಾಗಿದ್ದು, 21 ವರ್ಷದ ವಸಂತ್ ಹಣ್ಣು ವ್ಯಾಪಾರ ಮಾಡಿಕೊಮಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ದೀಪಾಂಜಲಿ ನಗರದ ಮುಖ್ಯರಸ್ತೆಯ ಬದಿಯಲ್ಲೇ ತಳ್ಳುವ ಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ವಸಂತ್ ನಿನ್ನೆ ಮಳೆ ಬಂದಾಗ ಅಲ್ಲೇ ನಿಂತಿದ್ದ. ಆ ಕಟ್ ಆದ ವೈರ್ ಕಂಬದ ಪಕ್ಕದಲ್ಲೇ ನಿಂತಿದ್ದ ಯುವಕನಿಗೆ ತಾಗಿದ್ದು, ಕರೆಂಟ್ ಶಾಕ್ ಹೊಡೆದು ಯುವಕ ಕೆಳಗೆ ಬಿದ್ದಿದ್ಧಾನೆ. ಕೆಳಗೆ ಬಿದ್ದ ಯುವಕನನ್ನ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಈ ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ನಿರ್ಲಕ್ಷ್ಯದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.