ಕೆಲವರು ನಾನೇ ಸಮರ್ಥ ಎನ್ನುವ ಭ್ರಮೆಯಲ್ಲಿದ್ದಾರೆ : ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಹಿಂದುಳಿದ ಮಠಗಳಿಗೆ ಸರ್ಕಾರದದಿಂದ ಅನುದಾನ ಬಿಡುಗಡೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದಿಂದ ಕೃತಜ್ಞತೆ ಸಮಾರಂಭ ಭಾನುವಾರ ಕೆಂಗೇರಿಯ ರಾಮಾನುಜ ಮಠದಲ್ಲಿ ನಡೆಯಿತು.
ಮೈಸೂರು ರಸ್ತೆಯ ರಾಮಾನುಜ ಮಠದ ಆವರಣದಲ್ಲಿ ಹಿಂದುಳಿದ, ದಲಿತ ಮಠಾಧೀಶರು ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡುತ್ತಾ, ಕೇವಲ ಭಾಷಣ ಮಾಡಿದ್ರಿ ಏನು ಸಾಮಾಜಿಕ ನ್ಯಾಯ ಕೊಟ್ರಿ?. ಕೆಲವರು ನಾವೇ ಸಾಮರ್ಥ್ಯವಂತರು ಅನ್ನೋ ಭ್ರಮೆಯಲ್ಲಿದ್ದಾರೆ. ಅಂಥವರಿಗೆ ಅವರ ಸ್ಥಾನವನ್ನು ಜನರೇ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನನಗೆ ಭ್ರಮೆ ಇಲ್ಲ, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಚಿಂತನೆಯಡಿ ನಾನು ಕೆಲಸ ಮಾಡ್ತಿದ್ದೇನೆ. ಕೆಲವರು ಸಾಮರ್ಥ್ಯದ ಬಗ್ಗೆ ಮಾತಾಡ್ತಾರೆ. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬೋದೇ ಸಾಮರ್ಥ್ಯ. ಭಾಷಣದಿಂದ ಸಾಮರ್ಥ್ಯ ಬರಲ್ಲ. ವಿದ್ಯೆ ಇಲ್ಲದಿರೋರಿಗೆ ವಿದ್ಯೆ, ಕೆಲಸ ಇಲ್ಲದಿರೋರಿಗೆ ಕೆಲಸ ಕೊಡೋದೇ ಸಾಮರ್ಥ್ಯ.
ನಮ್ಮ ಕೃತಿಯಿಂದ ನಮ್ಮನ್ನು ಅಳೆಯಿರಿ. ಇನ್ನೊಬ್ಬರನ್ನು ಬೈದು ನಾವು ಮತ ಕೇಳಲ್ಲ. ನಾವು ಮಾಡಿರೋ ಕೆಲಸ ಇಟ್ಟು ಮತ ಕೇಳ್ತೀವಿ. ನಮ್ಮ ರಿಪೋರ್ಟ್ ಕಾರ್ಡ್ ಮುಂದೆ ಇಟ್ಟು ಮತ ಕೇಳ್ತೇವೆ. ನಮ್ಮ ಕೆಲಸ ನೋಡಿ ಆಶೀರ್ವದಿಸಿ ಎಂದು ಹೇಳಿದರು.
ನನ್ನ ಕಲ್ಪನೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ನನ್ನ ಬಜೆಟ್ ಕೂಡ ಅದೇ ರೀತಿ ಇದೆ. ಆರ್ಥಿಕತೆ ಅಂದರೆ ಹಣ ಅಲ್ಲ, ನನ್ನ ಪ್ರಕಾರ ಆರ್ಥಿಕತೆ ಅಂದರೆ ದುಡಿಮೆ, ದುಡಿಮೆಯೇ ದೊಡ್ಡಪ್ಪ ಎಂದು ಬದಲಾವಣೆ ಮಾಡಿದ್ದೇನೆ. ಪ್ರಥಮ ಬಾರಿಗೆ ಶಾಲೆಗಳ ಕಟ್ಟಡಕ್ಕೆ ವಿಶೇಷ ಅನುದಾನ ನೀಡಿದ್ದೇನೆ. ದೀನ ದಲಿತರ ಕಲ್ಯಾಣಕ್ಕೆ 3000 ಕೋಟಿ ಅನುದಾನ ಕೊಟ್ಟಿದ್ದೇನೆ. ನಾನು ಏನು ಸುಮ್ಮನೆ ಕುಳಿತಿಲ್ಲ, ಬಜೆಟ್ ನ 99 ಪರ್ಸೆಂಟ್ ಯೋಜನೆ ಗಳ ಅನುಷ್ಠಾನಕ್ಕೆ ಆದೇಶ ಮಾಡಿದ್ದೇನೆ ಎಂದರು