ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಆರೋಪಿ ಮುಖ್ಯೋಪಾಧ್ಯಾಯ ಕಾಶಿನಾಥ್ ಪೊಲೀಸರಿಗೆ ಶರಣು! | JANATA NEWS
ಕಲಬುರಗಿ : ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಪಿಎಸ್ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯ ಬಂಧನವಾಗಿದ್ದು, ಆಕ್ರಮ ನಡೆದ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸೋಮವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್ಐ ನೇಮಕಾತಿ ಅಕ್ರಮ ತನಿಖೆ ಆರಂಭವಾಗುತ್ತಿದ್ದಂತೆ ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ತಲೆ ಮರೆಸಿಕೊಂಡಿದ್ದ.
ದಿವ್ಯಾ ಹಾಗರಗಿ ಮತ್ತು ಪ್ರಮುಖ ಆರೋಪಿ ಇಂಜಿನಿಯರ್ ಮಂಜುನಾಥ್ ಮೇಳಕುಂದಿ, ರುದ್ರಗೌಡ ಪಾಟೀಲ್ ನಡುವೆ ಸಂಪರ್ಕ ಕೊಂಡಿಯಾಗಿ ಕಾಶಿನಾಥ್ ಕಾರ್ಯ ನಿರ್ವಹಿಸಿದ್ದರು.
ಕಳೆದ 22 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಶಿನಾಥ್, ಸೋಮವಾರ ಬೆಳಿಗ್ಗೆ 8.30 ರ ಸುಮಾರಿಗೆ ಸಿಐಡಿ ತಂಡದ ಎದುರಿಗೆ ಶರಣಾಗಿದ್ದಾರೆ. ಈ ಮೂಲಕ ಈ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 26ಕ್ಕೆ ಏರಿದಂತಾಗಿದೆ.