ಅಪಘಾತದಲ್ಲಿ ಪ್ರಿಯತಮನ ಸಾವು, ವಿಷ ಸೇವಿಸಿ ಜೀವ ಬಿಟ್ಟ ಪ್ರಿಯತಮೆ! | JANATA NEWS
ತುಮಕೂರು : ಪ್ರಿಯತಮ ಅಪಘಾತದಲ್ಲಿ ಸಾವನ್ನಪ್ಪಿದ್ದ ಸುದ್ದಿ ಕೇಳಿ ಪ್ರಿಯತಮೆಯೂ ವಿಷ ಸೇವಿಸಿ ಜೀವ ಬಿಟ್ಟ ಘಟನೆ ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ತುಮಕೂರಿನ ಮಸ್ಕಲ್ ಗ್ರಾಮದ ಧನುಷ್ ಎಂಬ 23 ವರ್ಷದ ಯುವಕ ಮತ್ತು 22 ವರ್ಷದ ಯುವತಿ ಸುಷ್ಮಾ ಪ್ರೀತಿಸುತ್ತಿದ್ದರು.
ಈಕೆ ಎಂಕಾಂ ವ್ಯಾಸಾಂಗ ನಡೆಸುತ್ತಿದ್ದಳು. ಈ ಜೋಡಿ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿತ್ತು. ಅಲ್ಲದೆ, ಇವರಿಬ್ಬರ ಪ್ರೀತಿ ವಿಚಾರ ತಿಳಿದ ಕುಟುಂಬಸ್ಥರು, ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಸಪ್ತಪದಿ ತುಳಿಯುವ ಸಿದ್ಧತೆಯಲ್ಲಿದ್ದರು.
ಆದರೆ ಮೇ 11 ರಂದು ಜಾತ್ರೆಗೆಂದು ಬೆಂಗಳೂರಿನಿಂದ ಬರುತ್ತಿದ್ದಾಗ ನೆಲಮಂಗಲದ ಕುಲಾನಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ಧನುಷ್ ಸಾವನ್ನಪ್ಪಿದ್ದು, ಈ ಘಟನೆಯಿಂದ ಸುಷ್ಮಾ ಆಘಾತಕ್ಕೆ ಒಳಗಾಗಿದ್ದಳು. ಸದಾ ದುಃಖಿಸುತ್ತಿದ್ದ ಸುಷ್ಮಾ, ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆಯನ್ನು ಉಳಿಸಿಕೊಳ್ಳಲು ನಾಲ್ಕೈದು ಆಸ್ಪತ್ರೆಗೆ ಅಲೆದಾಡಿದರೂ ರಾತ್ರಿ ಸುಮಾರು 8ಗಂಟೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಯುವತಿಯ ಸ್ವಾಗ್ರಾಮವಾದ ತುಮಕೂರಿನ ಅರೆಹಳ್ಳಿಯಲ್ಲಿ ಆಕೆಯನ್ನು ಸಮಾಧಿ ಮಾಡದ ಪೋಷಕರು, ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಧನುಷ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.