ಬಿಬಿಎಂಪಿ ಕಸದ ಲಾರಿ ಹರಿದು ಡೆಲಿವರಿ ಬಾಯ್ ಸಾವು, ಲಾರಿ ಚಾಲಕ ಪರವಾನಿಗೆಯನ್ನೇ ಹೊಂದಿಲ್ಲ! | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿತ್ತು.
ಶನಿವಾರ ಸಂಜೆ ನಾಗವಾರ-ಹೆಗಡೆನಗರ ಮಾರ್ಗದ ಥಣಿಸಂದ್ರ ರೈಲ್ವೆ ಮೇಲ್ಸೇತುವೆ ಕರ್ತವ್ಯಕ್ಕೆ ತೆರಳಿದ್ದ ರೇವಣ್ಣನ ಬೈಕ್ಗೆ ಬಿಬಿಎಂಪಿ ಕಸದ ಲಾರಿ ಗುದ್ದಿತ್ತು. ಇದರಿಂದ ನೆಲಕ್ಕೆ ಬಿದ್ದ ರೇವಣ್ಣ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದೆ. ಇದರಿಂದ ರೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಿಬಿಎಂಪಿ ಕಸದ ಲಾರಿ ಹರಿದು ಡೆಲಿವರಿ ಬಾಯ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ದಿನೇಶ್ ನಾಯ್ಕ್ ಪರವಾನಿಗೆಯನ್ನೇ ಹೊಂದಿಲ್ಲ. ಲಾರಿ ಓಡಿಸಲು ಅರ್ಹತೆ ಇಲ್ಲದಿದ್ದರೂ ಡ್ರೈವಿಂಗ್ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.
ಬಂಧಿತ ಕಸದ ಲಾರಿ ಚಾಲಕ ದಿನೇಶ್ ನಾಯ್ಕ್ ಬಳಿ ಲಘು ಮೋಟಾರು ವಾಹನದ (ಎಲ್ಎಂವಿ) ಲೈಸೆನ್ಸ್ ಮಾತ್ರ ಇದೆ. ಭಾರಿ ಮೋಟಾರ್ ವಾಹನ (ಹೆಚ್ಎಂವಿ)ದ ಲೈಸೆನ್ಸ್ ಇಲ್ಲದಿದ್ರೂ, ಚಲಾಯಿಸಿ ಅಪಘಾತಕ್ಕೆ ಕಾರಣವಾಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಬಿಬಿಎಂಪಿ ಸರಿಯಾಗಿ ಲೈಸೆನ್ಸ್ ಪರಿಶೀಲಿಸದೇ ಚಾಲನೆಗೆ ಅನುಮತಿ ನೀಡಿ ದೊಡ್ಡ ಎಡವಟ್ಟು ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಲಾರಿಯ ಚಾಲಕ 40 ವರ್ಷ ವಯಸ್ಸಿನ ದಿನೇಶ್ ನಾಯ್ಕ್ ನನ್ನು ಬಂಧಿಸಿರುವ ಚಿಕ್ಕಜಾಲ ಟ್ರಾಫಿಕ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.