ದತ್ತಪೀಠದಲ್ಲಿ ಮಾಂಸಹಾರ ಸೇವನೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಸಿ.ಟಿ. ರವಿ | JANATA NEWS
ಕಲಬುರಗಿ : ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹೋಮ - ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಡಿಯೋವೊಂದು ವೈರಲ್, ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಂಸಹಾರ ಸೇವನೆ ಬಗ್ಗೆ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು.
ದತ್ತಪೀಠ ಆವರಣದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಅಲ್ಲಿನ ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕಳುಹಿಸಿ ಮಾಹಿತಿ ಕೇಳಿದ್ದೇನೆ. ಮಾಂಸಾಹಾರ ಮಾಡಿರೋದು ಅಕ್ಷಮ್ಯ ಅಪರಾಧ, ಅಲ್ಲಿನ ಜವಾಬ್ದಾರಿ ಯಾರಿಗೆ ನೀಡಲಾಗಿತ್ತೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರ ಕುಮ್ಮಕ್ಕು ಇದ್ದರೂ ಕೂಡ ಅಲ್ಲಿ ಆ ರೀತಿ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ ಆಗಿತ್ತು ಎಂದರು.
ಇದನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತವರು ಈ ಕುರಿತು ಉತ್ತರಿಸಬೇಕು. ಪೀಠದಿಂದ ಮುನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ, ಪ್ರಾಣಿ ಬಲಿಗೆ ನಿಷೇಧವಿದೆ. ಆದರೂ ಕೂಡ ಹೇಗೆ ಅಲ್ಲಿ ಪ್ರಾಣಿಬಲಿ, ಮಾಂಸಾಹಾರ ಮಾಡಿದ್ದಾರೆ ಅನ್ನೋ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದೆ ಈ ರೀತಿ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ತಾಲೂಕಿನಲ್ಲಿರುವ ವಿವಾದಿತ ಸ್ಥಳ ದತ್ತಪೀಠದಲ್ಲಿ, ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ನಡೆದಿದೆ. ಗೋರಿ ಪೂಜೆ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.