ಕಣ್ಣೆದುರೇ ಮಗನ ಕೊಲೆಯಾದರೂ, ಸಾವಿಗೆ ನ್ಯಾಯ ಸಿಗಲಿಲ್ಲ ಎಂದು ದಯಾಮರಣಕ್ಕೆ ಮುಂದಾದ ಕುಟುಂಬ | JANATA NEWS
ಮೈಸೂರು : ಮಗನ ಸಾವಿಗೆ ನ್ಯಾಯ ಸಿಗದ ಹಿನ್ನೆಲೆ ಮೈಸೂರಿನ ಕುಟುಂಬವೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದೆ.
ಸ್ವಾಮಿ ನಾಯಕ್ ಎಂಬ ಯುವಕ ಕಳೆದ ಫೆ.14ರ ಪ್ರೇಮಿಗಳ ದಿನದಂದೇ ಕೊಲೆಯಾಗಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಚೋಳಮ್ಮ ಕುಟುಂಬ ತನ್ನ ಮಗನ ಸಾವಿಗೆ ನ್ಯಾಗ ಸಿಕ್ಕಿಲ್ಲವೆಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ದಯಾಮರಣಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿಕೊಂಡಿದೆ.
ಫೆಬ್ರವರಿ 14ರಂದು ಚೋಳಮ್ಮನವರ ಪುತ್ರ ಸ್ವಾಮಿ ಮೃತಪಟ್ಟಿದ್ದರು. ಅದೇ ಗ್ರಾಮದ ಯುವತಿಯನ್ನು ಸ್ವಾಮಿ ಪ್ರೀತಿಸುತ್ತಿದ್ದ ಎಂಬ ಆರೋಪವಿದೆ. ಏಕೆಂದರೆ ಮೃತ ಸ್ವಾಮಿ ತನ್ನ ಕೈ ಮೇಲೆ ಆಕೆಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ. ಗ್ರಾಮದ ಪಾಪಣ್ಣ ಎಂಬುವವರ ಮನೆಯಲ್ಲಿ 2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸ್ವಾಮಿ, ಪಾಪಣ್ಣನ ಮಗಳನ್ನೇ ಪ್ರೀತಿಸಿದ್ದ ಎನ್ನಲಾಗಿದೆ.
ಪ್ರೇಮಿಗಳ ದಿನಾಚರಣೆ ವೇಳೆ ಪಾಪಣ್ಣನ ಮಗಳ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಇದೇ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಸ್ವಾಮಿ ಕುಟುಂಬದವರ ಮೇಲೆ ಪಾಪಣ್ಣ ಕಡೆಯವರು ರಸ್ತೆಯಲ್ಲಿ ಹಲ್ಲೆ ಮಾಡಿದ್ದರು.
ಮನೆಯಲ್ಲಿದ್ದ ಸ್ವಾಮಿ ಎಳೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪಾಪಣ್ಣ ಕುಟುಂಬಸ್ಥರ ಹಲ್ಲೆಯಿಂದ ಸ್ವಾಮಿ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ವೇಳೆ ಸ್ವಾಮಿ ಮೃತಪಟ್ಟಿದ್ದ ಎನ್ನಲಾಗಿದೆ.
ಪಾಪಣ್ಣನವರ ಸಹೋದರ ಶಿವಣ್ಣ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ಶವದ ಮರಣೋತ್ತರ ಪರೀಕ್ಷೆ ನಡೆಸಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.