ಡಿಸಿ ಅಂದ್ರೆ ಅವನೇನು ಆಕಾಶದಿಂದ ಬಂದವನಾ..? ಅವನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಅಷ್ಟೇ | JANATA NEWS
ಬಾಗಲಕೋಟೆ: : ತಮ್ಮ ಗಮನಕ್ಕೆ ತೆಗೆದುಕೊಂಡು ಬರದೇ ಜೂನ್ 21 ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸಿದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಡಿಸಿ ಅಂದ್ರೆ ಅವನೇನು ಆಕಾಶದಿಂದ ಬಂದವನಾ..? ಅವನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಅಷ್ಟೇ. ಇವರಿಗೆಲ್ಲಾ ಹುಡುಗಾಟ ಆಗಿ ಬಿಟ್ಟಿದೆ. ಕಲೆಕ್ಟರ್, ತಹಸೀಲ್ದಾರ್ ಅನ್ನೋದೆಲ್ಲಾ ಬ್ರಿಟಿಷರ ಕಾಲಕ್ಕೆ ಹೊರಟೋಯ್ತು ಎಂದು ಕಿಡಿ ಕಾರಿರುವ ಸಿದ್ದರಾಮಯ್ಯ, ಡಿಸಿಗೆ ಫೋನ್ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾದಾಮಿ ಪ್ರವಾಸದ ಸಂದರ್ಭದಲ್ಲಿ ಬಾಗಲಕೋಟೆ ಡಿಸಿ ಸುನೀಲ ಕುಮಾರ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ ಅವರು, ಮಾಹಿತಿ ನೀಡದೆ ಯೋಗ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯು ಡೋಂಟ್ ನೋ ಪ್ರೋಟೋಕಾಲ್? ಯು ಮಸ್ಟ್ ಅಬ್ಜರ್ವ್ ಪ್ರೋಟೋ ಕಾಲ್. ಅವನ್ಯಾವನೋ ಮಿನಿಸ್ಟ್ರು ಬರ್ತಾನೆ. ನೀನು ಇನ್ವಿಟೇಶನ್ ಮಾಡಿ ಕಳಿಸಿಬಿಟ್ರೆ ಹೇಗೆ? ನಾನು ಈ ಕ್ಷೇತ್ರದ ಶಾಸಕ. ನೀನು ಡಿಸಿ ಈ ಕ್ಷೇತ್ರದ ಪ್ರತಿನಿಧಿ. ನೀನು ಸೇವಕನಾಗಿ ಆಯ್ಕೆಯಾದವನು. ನಿನ್ನ ಜವಾಬ್ದಾರಿಯನ್ನು ಮೊದಲು ತಿಳಿದುಕೊಳ್ಳಬೇಕು. ಆಮತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕುವ ಮುನ್ನ ನನ್ನನ್ನು ಸಂಪರ್ಕಿಸಬೇಕು. ಕ್ಷೇತ್ರದ ಜನರಿಗೆ ಇದರಿಂದ ಯಾವ ಮೇಸೆಜ್ ಹೋಗುತ್ತೆ? ನಿಮಗೆಲ್ಲ ಯಾರು ಕೆಲಸ ಕೊಟ್ಟವನು? ಇನ್ನೊಂದ್ ಸಾರಿ ಹೀಗಾದ್ರೆ ಸುಮ್ಮನೆ ಬಿಡೋದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಫೋನ್ ಕರೆ ಕಟ್ ಮಾಡಿದ ಬಳಿಕವೂ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಡಿಸಿ ಅಂದ್ರೆ ಅವನೇನು ಆಕಾಶದವನಾ..? ಅವನು ಒಬ್ಬ ಜಿಲ್ಲಾಮಟ್ಟದ ಅಧಿಕಾರಿ ಅಷ್ಟೇ.. ಹುಡುಗಾಟ ಆಗಿ ಬಿಟ್ಟಿದೆ ಇವರಿಗೆ.. ಬ್ರಿಟಿಷರ ಕಾಲಕ್ಕೆ ಡಿಸಿ, ಕಲೆಕ್ಟರ್, ತಹಶೀಲ್ದಾರ್ ಅನ್ನೋದು ಹೊರಟೋಯ್ತು. ಈಗ ಅಧಿಕಾರಿಗಳೆಲ್ಲ ಕೊಬ್ಬಿ ಹೋಗಿದ್ದಾರೆ. ಅವನ್ಯಾವನೋ ಚಂದ್ರಶೇಖರ (ಕೇಂದ್ರ ಸಚಿವ) ಬರ್ತಾನೆ ಅಂತ ಮಾಡ್ತಿದ್ದಾರೆ. ಅವನಿಗೂ ಈ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ. ಅವನು ಬಂದು ಯೋಗಾ ಡೇ ನಲ್ಲಿ ಭಾಗವಹಿಸ್ತಾನೆ.. ನಾನು ಹೋಗಲ್ಲ, ಜನ ಏನಂತ ತಿಳಿದುಕೊಳ್ತಾರೆ…? ಈಗ ನಾನು ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದಿದ್ದಾರೆ.