ಚಿಟ್ಫಂಡ್ ವ್ಯವಹಾರ ನಡೆಸಿ ಲಕ್ಷಾಂತರ ರೂ. ಪಂಗನಾಮ, ವಂಚಕಿ ಅರೆಸ್ಟ್ | JANATA NEWS
ಬೆಂಗಳೂರು : ಚಿಟ್ ಫಂಡ್ ಹೆಸರಿನಲ್ಲಿ ಹಲವಾರು ಮಂದಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಕೊಂಡು ನಂತರ ಬಡ್ಡಿ ಹಾಗೂ ಅಸಲು ಹಣವನ್ನು ನೀಡದೆ ಪರಾರಿಯಾಗಿದ್ದಳು.
ಲಕ್ಷ್ಮೀವಾಣಿ ಬಂಧಿತ ವಂಚಕಿ. ವಾರಿಧಿ ಚಿಟ್ ಫಂಡ್ ಮಾಡುತ್ತಿದ್ದ ಲಕ್ಷ್ಮೀವಾಣಿ ಜನರನ್ನು ವಂಚಿಸಿ ಹಣ ಸಂಗ್ರಹಣೆ ಮಾಡುತ್ತಿದ್ದಳು. ಈ ಹಿನ್ನೆಲೆ ಸಾರ್ವಜನಿಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಲಕ್ಷ್ಮೀವಾಣಿಯನ್ನು ಬಂಧಿಸಿದ್ದಾರೆ.
ಲಕ್ಷ್ಮೀವಾಣಿ ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದು, ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದಳು. ಈಕೆ ತನ್ನ ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ದಳು. ಅಲ್ಲದೇ ಈ ಕಂಪನಿಗೆ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿದ್ದಳು.
ಹೆಚ್ಚಾಗಿ ವೃದ್ಧರೇ ಈ ದಂಪತಿ ಟಾರ್ಗೆಟ್. ಪೆನ್ಷನ್ ಹಣವನ್ನು ಈಕೆಯ ಚಿಟ್ ಫಂಡ್ಗೆ ಹಾಕುತ್ತಿದ್ದರು. ಆದರೆ ಈಕೆ ಜನರನ್ನು ವಂಚಿಸಿ ಹಣವನ್ನು ತೆಗೆದುಕೊಂಡು ಮೋಸ ಮಾಡುತ್ತಿದ್ದಳು.
ದೂರು ಕೊಡುತ್ತಿದ್ದಂತೆಯೇ ಈಕೆ ಎಸ್ಕೇಪ್ ಆಗಿದ್ದಳು. ಒಂದು ವರ್ಷದ ಹುಡುಕಾಟದ ನಂತರ ಆರೋಪಿ ಲಕ್ಷ್ಮೀವಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.