ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್ | JANATA NEWS
ಬೆಂಗಳೂರು : ಕೆಂಪೇಗೌಡರ ಅಧ್ಯಾಯವಿದ್ದ ಪರಿಷ್ಕೃತ ಪಠ್ಯದ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದು ತಪ್ಪು, ಎಂದು ಕಂದಾಯ ಸಚಿವ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಅವರು ವಿಧಾನಸೌಧದಲ್ಲಿ ಇಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಫ್ರೀಡಂ ಪಾರ್ಕನಲ್ಲಿ ಪಠ್ಯ ಪರಿಷ್ಕರಣೆ ವಿರೋಧಿಸಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪರಿಷ್ಕೃತಗೊಂಡ ಪಠ್ಯದ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿದು ಹಾಕಬಾರದಿತ್ತು. ಅದರಲ್ಲಿ ಕೆಂಪೇಗೌಡರ ಅಧ್ಯಾಯವಿತ್ತು. ಅದನ್ನು ಹರಿದು ಹಾಕಿದ್ದು ಎಷ್ಟು ಸರಿ, ಎಂದು ಪ್ರಶ್ನಿಸಿದರು.
ಅದರ ಬದಲು ಅವರು ಹಿಂದೆ ಮಾಡಿದ್ದ ಪಠ್ಯಪುಸ್ತಕ ಬಗರೂರು ರಾಮಚಂದ್ರಪ್ಪ ಅವರು ಮಾಡಿದ್ದ ಪಠ್ಯಪುಸ್ತಕವನ್ನು ಹರಿದ ಹಾಕಬೇಕಾಗಿತ್ತು. ಅದರಲ್ಲಿ ಕೆಂಪೇಗೌಡರ ಬಗ್ಗೆ ಇತಿಹಾಸ ಇರಲಿಲ್ಲ, ಅವರ ಚಿತ್ರ ಕೂಡ ಇರಲಿಲ್ಲ. ಈಗ ಪರಿಷ್ಕರಿಸಲ್ಪಟ್ಟ ಪಠ್ಯದಲ್ಲಿ ಕೆಂಪೇಗೌಡರ ಇತಿಹಾಸ ಇದೆ ಇದನ್ನು ಹರಿದು ಹಾಕಿದ್ದು ಎಷ್ಟು ಸರಿ ಎಂದು ನಾನು ಪ್ರಶ್ನೆಯನ್ನು ಮಾಡುತ್ತಿದ್ದೇನೆ, ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಾಲದ ಪಠ್ಯಪುಸ್ತಕದ ಬಗ್ಗೆ ಸಚಿವ ಅಶೋಕ್ ಅವರು ಮಾತಾಡುತ್ತ, ಇವರಿಗೆ ಹಿಂದೂ ಇರಬಾರದು, ಹಿಂದೂ ಸಮುದ್ರ ಇರಬಾರದು, ಹಿಂದೂ ಪದ ಇರಬಾರದು, ಹಿಂದೂ ದೇವರ ಹೆಸರು ಇರಬಾರದು, ಸ್ವತಂತ್ರ ಹೋರಾಟಗಾರರ ಹೆಸರು ಇರಬಾರದು. ಗಜನಿ ಮೊಹಮ್ಮದ್, ಔರಂಗಜೇಬ್, ಖಿಲ್ಜಿ, ಟಿಪ್ಪು ಹೈದರಾಲಿ ಇವರ ಬಗ್ಗೆ ಮಕ್ಕಳಿಗೆ ಜಾಸ್ತಿ ತಿಳಿಯಬೇಕು. ಇದನ್ನು ನಿರಂತರವಾಗಿ ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ. ಇದನ್ನೆಲ್ಲ ನಾವು ತೆಗೆದುಹಾಕಿದ್ದೇವೆ. ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿ ನೆಲದ ಸಂಸ್ಕೃತಿಯನ್ನು ಬಿಂಬಿಸುವಂತಹ ಒಂದು ಪಠ್ಯಪುಸ್ತಕವನ್ನು ನಾವು ಕೊಟ್ಟಿದ್ದೇವೆ, ಎಂದು ಸಚಿವ ಅಶೋಕ್ ಅವರು ಪಠ್ಯಪುಸ್ತಕ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.