ಉದಯಪುರ್ ಹತ್ಯೆ, ಅಮಾನವೀಯ ಮತ್ತು ಹೇಯ ಕೃತ್ಯ! | JANATA NEWS
ಬೆಂಗಳೂರು : ಉದಯ್ಪುರದಲ್ಲಿ ನಡೆದ ಭೀಕರ ಹತ್ಯೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಯಿಸಿ ಅಮಾನವೀಯ ಮತ್ತು ಹೇಯ ಕೃತ್ಯ ಎಂದಿದ್ದಾರೆ.
ಉದಯ್ಪುರದಲ್ಲಿ ನಡೆದಿರುವ ಪ್ರಕರಣ ಅಮಾನವೀಯ ಮತ್ತು ಅತ್ಯಂತ ಹೇಯ ಕೃತ್ಯವಾಗಿದೆ. ಇದು ಭಯೋತ್ಪಾದಕರ ಚಟುವಟಿಕೆಯಾಗಿದ್ದು, ಅದರ ಹಿಂದೆ ಬಹಳ ದೊಡ್ಡ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ ಎಂದಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಮತ್ತು ಕೃತ್ಯದಲ್ಲಿ ಭಾಗಿಯಾದವರನ್ನು ಗಲ್ಲಿಗೇರಿಸಬೇಕು ಎಂದರು.
ಉದಯ್ಪುರ ಘಟನೆ ಕುರಿತು ರಾಜಸ್ಥಾನ ಸರ್ಕಾರ ಕೂಡಲೇ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಬೇಕು. ಅದರ ಸಂಪೂರ್ಣ ತನಿಖೆ ಮಾಡಬೇಕು. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಹಂತಕರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳು ಎಲ್ಲವೂ ಇವೆ. ಹೀಗಾಗಿ ಸಮಗ್ರ ತನಿಖೆಯ ಅಗತ್ಯವಿದೆ ಎಂದರು.
ಕಮಿಷನ್ ಆರೋಪ ವಿಚಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಕೇಂದ್ರ ಗೃಹ ಇಲಾಖೆಯಿಂದ ದಾಖಲೆ ಕೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ನಮಗೆ ಯಾವ ಸೂಚನೆಯೂ ಬಂದಿಲ್ಲ. ಅವರ ಸಂಘಕ್ಕೆ ಸೂಚನೆ ಬಂದಿದ್ದರೆ ದಾಖಲೆ ಕೊಡಲಿ. ಪ್ರಧಾನಿಗಳ ನಿರ್ದೇಶನ ಮೇರೆಗೆ ತನಿಖೆ ಮಾಡುತ್ತೇವೆ ಎಂದರು.
ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದಿರುವ ವಿಚಾರವಾಗಿ ಮಾತನಾಡಿದ ಸಿಎಂ, ಅದು ಕಾಂಗ್ರೆಸ್ ನವರ ಆಂತರಿಕ ಸಮೀಕ್ಷೆ. ಅವರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದೇ ಹೇಳಬೇಕು. ಇನ್ನೇನು ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಹೇಳ್ತಾರಾ ಅವರು ಎಂದು ವ್ಯಂಗ್ಯವಾಡಿದರು